ʼವಿಕಟನ್ʼ ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ದಂಪತಿ
ಪತ್ನಿಗೆ, ದಯವಿಟ್ಟು ತಮಿಳಿನಲ್ಲೇ ಮಾತನಾಡು ಹಿಂದಿ ಬೇಡ ಎಂದ ರೆಹಮಾನ್
ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹಿಂದಿ ಬದಲು ತಮಿಳಿನಲ್ಲಿ ಮಾತಾಡುವಂತೆ ತಮ್ಮ ಪತ್ನಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ವಿಕಟನ್ ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮೊಂದಿಗೆ ಸ್ಮರಣ ಫಲಕ ಸ್ವೀಕರಿಸಿ ಕೆಲ ಮಾತುಗಳನ್ನು ಆಡುವಂತೆ ಪತ್ನಿ ಸಾಯಿರಾ ಬಾನು ಅವರನ್ನು ವೇದಿಕೆಗೆ ಕರೆಯುತ್ತಾರೆ ರೆಹಮಾನ್. ಪತಿ ಕೃತಜ್ಞತೆ ಸಲ್ಲಿಸಿ ತಮ್ಮ ಜೊತೆ ಬರುವಂತೆ ಕರೆದಾಗ ಭಾವುಕರಾಗುವ ಸಾಯಿರಾ ವೇದಿಕೆಯೆಡೆಗೆ ನಡೆಯುತ್ತಾರೆ. ಟ್ರೋಫಿಯನ್ನು ತಮಗೆ ಒಪ್ಪಿಸಿದ ಪತಿಯನ್ನು ಆಲಿಂಗಿಸುತ್ತಾರೆ. ಕೆಲ ಮಾತುಗಳನ್ನು ಆಡುವಂತೆ ಪತ್ನಿಗೆ ಹೇಳುವ ರೆಹಮಾನ್, ಆಕೆ ಮೈಕ್ನತ್ತ ತೆರಳುತ್ತಿದ್ದಂತೆ ‘ದಯವಿಟ್ಟು ತಮಿಳಿನಲ್ಲೇ ಮಾತನಾಡು, ಹಿಂದೀ ಬೇಡ’ ಎನ್ನುತ್ತಾರೆ.
ಸಾಯಿರಾ ಕೊಂಚ ತಬ್ಬಿಬ್ಬಾಗಿ “ಸ್ಸಾರೀ, ನನಗೆ ತಮಿಳಿನಲ್ಲಿ ಸರಾಗವಾಗಿ ಮಾತಾಡಲು ಬರುವುದಿಲ್ಲ, ದಯಮಾಡಿ ಕ್ಷಮಿಸಿ. ಅವರ ಕೊರಳು ನನ್ನ ಅಚ್ಚುಮೆಚ್ಚು. ಹೀಗಾಗಿ ನಾನು ‘ಸೂಪರ್ ಎಕ್ಸೈಟ್’ ಆಗಿದ್ದೇನೆ. ಅವರ (ರೆಹಮಾನ್) ದನಿಯೊಂದಿಗೆ ಪ್ರೇಮಕ್ಕೆ ಬಿದ್ದೆ ನಾನು. ಇಷ್ಟು ಮಾತ್ರ ಹೇಳಬಲ್ಲೆ” ಎಂದು ಮಾತು ಮುಗಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ‘ಅಗ್ನಿಸಾಕ್ಷಿ’ ಧಾರವಾಹಿ ನಟ ಸಂಪತ್ ಜಯರಾಮ್ ಆತ್ಮಹತ್ಯೆ
ರೆಹಮಾನ್ ತಮಿಳು ಭಾಷೆಯ ಪ್ರತಿಪಾದಕರು. ಭಿನ್ನ ರಾಜ್ಯಗಳ ಜನ ಪರಸ್ಪರ ಭೇಟಿಯಾದಾಗ ಇಂಗ್ಲಿಷ್ ಬದಲು ಹಿಂದಿಯಲ್ಲಿ ಮಾತಾಡಬೇಕೆಂದು ಗೃಹಮಂತ್ರಿ ಅಮಿತ್ ಶಾ ಕಳೆದ ವರ್ಷ ಅಪ್ಪಣೆ ಕೊಡಿಸಿದ್ದಾಗ ರೆಹಮಾನ್ ಅವರು ಮನೋನ್ಮಣಿಯಂ ಸುಂದರಂ ಪಿಳ್ಳೈ ಬರೆದು ಎಂ.ಎಸ್.ವಿಶ್ವನಾಥನ್ ಸಂಗೀತಕ್ಕೆ ಅಳವಡಿಸಿದ್ದ ತಮಿಳು ನಾಡಗೀತೆಗೆ ಸಂಬಂಧಿಸಿದ ತಮಿಳು ತಾಯಿಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿದ್ದರು.
ರೆಹಮಾನ್ ಸಾಯಿರಾ 1995ರಲ್ಲಿ ವಿವಾಹವಾಗಿದ್ದರು. ರೆಹಮಾನ್ ತಾಯಿಯವರೇ ಸಾಯಿರಾ ಅವರನ್ನು ಹುಡುಕಿ ಮದುವೆ ಏರ್ಪಾಡು ಮಾಡಿದ್ದರು. ಹೆಚ್ಚು ತೊಂದರೆ ಕೊಡದೆ, ಸ್ಫೂರ್ತಿ ತುಂಬುವ ವಧುವನ್ನು ಹುಡುಕಿಕೊಡುವಂತೆ ತಾಯಿಯನ್ನು ಕೇಳಿದ್ದರಂತೆ ರೆಹಮಾನ್.