ʼಪ್ರೋಮೋ ಶೂಟ್ʼ ತಯಾರಿಯ ದೃಶ್ಯಗಳನ್ನು ಹಂಚಿಕೊಂಡ ನಿರ್ಮಾಪಕರು
ನಿರ್ದೇಶಕರು, ಪಾತ್ರವರ್ಗದ ಬಗ್ಗೆ ಮಾಹಿತಿ ಬಹಿರಂಗ ಪಡಿಸದ ಚಿತ್ರತಂಡ
ʼವಿಕ್ರಾಂತ್ ರೋಣʼ ಚಿತ್ರದ ಯಶಸ್ಸಿನ ಬಳಿಕ ಒಂದು ವರ್ಷದ ಕಾಲ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ಸ್ಯಾಂಡಲ್ವುಡ್ನ ಸ್ಟಾರ್ ನಟ ಕಿಚ್ಚ ಸುದೀಪ್ ಯಾವುದೇ ಹೊಸ ಚಿತ್ರಗಳನ್ನು ಘೋಷಿಸಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಕ್ಕೂ ಮುನ್ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದ ಕಿಚ್ಚ ಒಟ್ಟೊಟ್ಟಿಗೆ ಮೂರು ಚಿತ್ರಗಳನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದರು. ಆ ಪೈಕಿ ಇದೀಗ 46ನೇ ಚಿತ್ರದ ಪ್ರೋಮೋ ಶೂಟ್ ಪೂರ್ಣಗೊಂಡಿದ್ದು, ಚಿತ್ರತಂಡ ವಿಡಿಯೋ ತುಣುಕನ್ನು ಹಂಚಿಕೊಂಡಿದೆ.
ಪ್ಯಾನ್ ಇಂಡಿಯಾ ಮಾದರಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್, ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಜೊತೆ ಕೈಜೋಡಿಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಸದ್ಯ ಬಿಡುಗಡೆಯಾಗಿರುವ ವಿಡಿಯೋದಲ್ಲಿ ನಿರ್ದೇಶಕರು ಮತ್ತು ಚಿತ್ರತಂಡದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸುದೀಪ್ ಪ್ರೋಮೋ ಶೂಟ್ಗಾಗಿ ತಯಾರಿ ನಡೆಸಿದ ದೃಶ್ಯಗಳಿದ್ದು, ಚಿತ್ರತಂಡದ ಕುರಿತ ಹೆಚ್ಚಿನ ವಿವರಗಳನ್ನು ಟೀಸರ್ನಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಲಾಗಿದೆ.
ರಜನಿಕಾಂತ್ ನಟನೆಯ ʼಕಬಾಲಿʼ, ಧನುಷ್ ಅಭಿನಯದ ʼಅಸುರನ್ʼ ಚಿತ್ರಗಳಿಗೆ ಬಂಡವಾಳ ಹೂಡಿದ್ದ ತಮಿಳಿನ ಖ್ಯಾತ ನಿರ್ಮಾಪಕ ʼಕಲೈಪುಲಿʼ ಖ್ಯಾತಿಯ ಎಸ್. ಧನು ಈ ವಿಡಿಯೋವನ್ನು ಹಂಚಿಕೊಂಡು ತಮ್ಮ ʼವಿ ಕ್ರಿಯೇಷನ್ಸ್ʼ ಬ್ಯಾನರ್ನಡಿ ಸುದೀಪ್ ಅವರ 46ನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದಾಗಿ ಖಚಿತ ಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಹೃದಯವಂತ ಶಾರುಖ್ ಖಾನ್
ತಮಿಳಿನ ನಿರ್ಮಾಪಕ ಎಸ್. ಧನು ಸುದೀಪ್ ಅವರ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಖಚಿತವಾಗುತ್ತಲೇ, ನಿರೀಕ್ಷೆಯಂತೆ ವೆಂಕಟ್ ಪ್ರಭು ಅವರೇ ಕಿಚ್ಚನ 46ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಚರ್ಚೆ ಕೂಡ ಅಭಿಮಾನಿ ಬಳಗದಲ್ಲಿ ಶುರುವಾಗಿದೆ.