ಶಿವರಾಜ್ ಕುಮಾರ್ ನಟನೆಯ ʼಭೈರತಿ ರಣಗಲ್ʼ ಸಿನಿಮಾದಲ್ಲಿ ನರ್ತನ್ ಬ್ಯುಸಿ
ಕೆಜಿಎಫ್-2 ಬಿಡುಗಡೆಯಾಗಿ ವರ್ಷ ಕಳೆದರೂ ಹೊಸ ಸಿನಿಮಾ ಘೋಷಿಸದ ಯಶ್
ಸ್ಟಾರ್ ನಟ ಯಶ್ ಮತ್ತು ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಕಾಂಬಿನೇಶನ್ನ ಸಿನಿಮಾ ಸೆಟ್ಟೇರಲಿದೆ. ಯಶ್ ಅವರ 19ನೇ ಚಿತ್ರಕ್ಕಾಗಿ ನರ್ತನ್ ಕಥೆ ಸಿದ್ಧಪಡಿಸುತ್ತಿದ್ದಾರೆ ಎಂಬ ಮಾತುಗಳು ಹಲವು ಬಾರಿ ಚರ್ಚೆಗೆ ಬಂದಿದ್ದವು. ಆದರೆ, ಇದೀಗ ನರ್ತನ್, ಶಿವರಾಜ್ ಕುಮಾರ್ ಅವರ ಜೊತೆ ಭೈರತಿ ರಣಗಲ್ ಸಿನಿಮಾ ಮಾಡುತ್ತಿದ್ದಾರೆ. ಹಾಗಿದ್ದಾರೆ ಯಶ್ಗಾಗಿ ಸಿದ್ಧಪಡಿಸಿದ್ದ ಕಥೆ ಏನಾಯ್ತು? ನರ್ತನ್-ಯಶ್ ಕಾಂಬಿನೇಶನ್ ಸಿನಿಮಾ ಸೆಟ್ಟೇರುತ್ತಾ ಎಂಬ ಹಲವು ಪ್ರಶ್ನೆಗಳಿಗೆ ಸ್ವತಃ ನರ್ತನ್ ಅವರೇ ಉತ್ತರಿಸಿದ್ದಾರೆ.
ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ʼಭೈರತಿ ರಣಗಲ್ʼ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಮುಹೂರ್ತ ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ನರ್ತನ್, ಯಶ್ ಜೊತೆ ತಾವು ಮಾಡಬೇಕಿದ್ದ ಸಿನಿಮಾದ ಕಥೆ ಏನಾಯ್ತು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ನಾನು ಯಶ್ ಅವರ 19ನೇ ಚಿತ್ರವನ್ನು ನಿರ್ದೇಶಿಸಬೇಕು ಎಂದುಕೋಂಡಿದ್ದು ನಿಜ. ಅದಕ್ಕಾಗಿ ಕಥೆಯನ್ನು ಕೂಡ ಸಿದ್ಧಪಡಿಸಿದ್ದೆ. ಆದರೆ, ಇವತ್ತಿನ ಕಾಲಘಟ್ಟದಲ್ಲಿ ನೆಟ್ಫ್ಲಿಕ್ಸ್, ಅಮೆಜಾನ್ನಂತಹ ವೇದಿಕೆಗಳಲ್ಲಿ ಪ್ರತಿದಿನ ಹೊಸ ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗೆ ಪೈಪೋಟಿಯ ಮೇಲೆ ಬಿಡುಗಡೆಯಾಗುವ ಸಿನಿಮಾಗಳಲ್ಲಿ ಕೆಲವೊಮ್ಮೆ ನಾವು ಬರೆದಿಟ್ಟುಕೊಂಡ ಕಥೆಯನ್ನು ಹೋಲುವ ಅಂಶಗಳಿದ್ದಾಗ ಬದಲಾವಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ಯಶ್ ಅವರ ಜೊತೆ ಸಿನಿಮಾ ಮಾಡುವುದು ತಡವಾಗುತ್ತಿದೆ. ಕೆಜಿಎಫ್ ನಂತರ ಯಶ್ ಅವರು ಕೇವಲ ಸ್ಟಾರ್ ನಟನಾಗಿ ಉಳಿದಿಲ್ಲ, ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರ ವರ್ಚಸ್ಸಿಗೆ ತಕ್ಕನಾದ ಸಿನಿಮಾ ಮಾಡಬೇಕು. ಹೀಗಾಗಿ ತಡವಾಗುತ್ತಿದೆ. ಅವರು ಕೂಡ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಸಿನಿಮಾದ ಕಥೆಯನ್ನು ಕೇಳಿದ್ದಾರೆ. ಕತೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಸದ್ಯದಲ್ಲೇ ಎಲ್ಲ ಮಾಹಿತಿ ನೀಡುತ್ತೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼಮಳ್ಳಿ ಪೆಳ್ಳಿʼ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನರೇಶ್ ಮೂರನೇ ಪತ್ನಿ
ʼಕೆಜಿಎಫ್-2ʼ ಸಿನಿಮಾ ಯಶಸ್ಸಿನ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡಿರುವ ಯಶ್ ಈವರೆಗೆ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿಲ್ಲ. ಇಷ್ಟು ದಿನಗಳ ಕಾಲ ನರ್ತನ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಯಶ್, ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಚಿತ್ರದಲ್ಲಿ ನಟಿಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ʼಕೆವಿಎನ್ ಪ್ರೊಡಕ್ಷನ್ಸ್ʼ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.