ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಯ್ತು ʼಭೀಷ್ಮʼ ಚಿತ್ರತಂಡ
ನೂತನ ಚಿತ್ರಕ್ಕೆ ಶುಭ ಹಾರೈಸಿದ ಮೆಗಾ ಸ್ಟಾರ್ ಚಿರಂಜೀವಿ
ಕನ್ನಡದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ನಲ್ಲೂ ಗುರುತಿಸಿಕೊಂಡಿರುವ ರಶ್ಮಿಕಾ, ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯೂ ಹೌದು. ಸದ್ಯ ʼಪುಷ್ಪ-2ʼ ಸಿನಿಮಾದಲ್ಲಿ ತೊಡಗಿಕೊಂಡಿರುವ ಅವರು ತೆಲುಗಿನ ಸ್ಟಾರ್ ನಟ ನಿತಿನ್ ಜೊತೆಗೆ ಮತ್ತೊಮ್ಮೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.
ನಿತಿನ್ ಮತ್ತು ರಶ್ಮಿಕಾ ನಟನೆಯ ಹೊಸ ಸಿನಿಮಾ ಇತ್ತೀಚೆಗೆ ಘೋಷಣೆಯಾಗಿದೆ. ಈ ತಾರಾ ಜೋಡಿ ಜೊತೆಯಾಗಿ ನಟಿಸಿದ್ದʼಭೀಷ್ಮʼ ಸಿನಿಮಾ 2020ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು. ʼಭೀಷ್ಮʼ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ವೆಂಕಿ ಕುದುಮುಲ ಹೊಸ ಕತೆಯೊಂದನ್ನು ರಚಿಸಿದ್ದು, ಈ ಚಿತ್ರದಲ್ಲೂ ನಿತಿನ್ ಮತ್ತು ರಶ್ಮಿಕಾ ಅವರೇ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ.
ಶುಕ್ರವಾರ ಹೈದರಾಬಾದ್ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ಜರುಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ಚಿತ್ರೀಕರಣಕ್ಕೆ ಚಾಲನೆ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ನಿತಿನ್, ರಶ್ಮಿಕಾ ಮತ್ತು ಪ್ರಕಾಶ್ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋ ಬಿಡುಗಡೆ ಮಾಡುವ ಮೂಲಕ ನಿರ್ದೆಶಕ ವೆಂಕಿ ನೂತನ ಚಿತ್ರವನ್ನು ಘೋಷಿಸಿದ್ದಾರೆ. ಅಂದಾಜು 4 ನಿಮಿಷಗಳ ಈ ವಿಡಿಯೋದಲ್ಲಿ ರಶ್ಮಿಕಾರ ಹೇಳಿಕೆಗಳ ಸುತ್ತ ಹೇಗೆ ವಿವಾದ ಸೃಷ್ಟಿಯಾಗುತ್ತದೆ ಎಂಬ ಬಗ್ಗೆಯೂ ವ್ಯಂಗ್ಯಮಯ ಚರ್ಚೆ ನಡೆದಿದೆ. ʼಮೈತ್ರಿ ಮೂವಿ ಮೇಕರ್ಸ್ʼ ಬ್ಯಾನರ್ನಡಿಯಲ್ಲಿ ನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ನೂತನ ಚಿತ್ರ ಭಿನ್ನ ಕಥಾಹಂದರವನ್ನು ಹೊಂದಿರುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿರುವ ವೆಂಕಿ, ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಮತ್ತು ಪಾತ್ರವರ್ಗವನ್ನು ಪರಿಚಯಿಸುವುದಾಗಿ ತಿಳಿಸಿದ್ದಾರೆ.