- ಹಿಂದೂ ಧರ್ಮಕ್ಕೆ ಮತಾಂತರವಾಗಿ ಎಂದ ಮುಸ್ಲಿಂ ಮೂಲಭೂತವಾದಿಗಳು
- ನಟಿಯಿಂದ ದೇವಸ್ಥಾನ ಅಪವಿತ್ರ ಎಂದ ಹಿಂದೂ ಮೂಲಭೂತವಾದಿಗಳು
ಬಾಲಿವುಡ್ನ ಖ್ಯಾತ ನಟ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ತೆರೆಗೆ ಸಜ್ಜಾಗಿದೆ. ಸದ್ಯ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ವಿಕ್ಕಿ ಮತ್ತು ಸಾರಾ ಬುಧವಾರ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಟಿಯನ್ನು ಟ್ರೋಲ್ ಮಾಡಲಾಗುತ್ತಿದ್ದು, ಟೀಕಾಕಾರರಿಗೆ ನಟಿ ತಿರುಗೇಟು ನೀಡಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಚಿತ್ರತಂಡದ ಜೊತೆಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಾರಾ, ಭಸ್ಮಾರತಿಯಲ್ಲಿ ಭಾಗಿಯಾಗಿದ್ದಾರೆ. ಪೂಜೆ ಸಲ್ಲಿಸಿದ ಸಂದರ್ಭದ ಫೋಟೋಗಳನ್ನು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಹಲವರು ಮುಸ್ಲಿಂ ಮೂಲಭೂತವಾದಿಗಳು ʼಹಿಂದೂ ಧರ್ಮಕ್ಕೆ ಮತಾಂತರವಾಗಿ ಬಿಡಿʼ ಎಂದು ನಟಿಯನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲ ಅಶ್ಲೀಲ ಪದಬಳಕೆಯನ್ನೂ ಮಾಡಿದ್ದಾರೆ.
“ಯಾರು ಬೇಕಾದರೂ ಭೇಟಿ ನೀಡಲು ದೇವಸ್ಥಾನ ಪ್ರವಾಸಿ ಸ್ಥಳವಲ್ಲ. ನಟಿಯ ಪ್ರವೇಶದಿಂದಾಗಿ ದೇವಸ್ಥಾನ ಅಪವಿತ್ರಗೊಂಡಿದೆ. ಇಡೀ ದೇವಸ್ಥಾನವನ್ನು ಶುದ್ಧೀಕರಿಸಬೇಕು” ಎಂದು ಹಿಂದು ಮೂಲಭೂತವಾದಿಗಳೂ ಸಾರಾ ಅಲಿಖಾನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಈ ಎರಡೂ ಕಡೆಯವರ ಟೀಕೆಯನ್ನು ಉಲ್ಲೇಖಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಾರಾ, “ನಾನು ನನ್ನ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತೇನೆ. ಜನರಿಗಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಜನರಿಗೆ ನನ್ನ ಕೆಲಸ ಇಷ್ಟವಾಗದಿದ್ದರೆ ನನಗೆ ಬೇಸರವಾಗುವುದು ಸಹಜ. ಆದರೆ, ನನ್ನ ವೈಯಕ್ತಿಕ ನಂಬಿಕೆಗಳು ನನಗಷ್ಟೇ ಸಂಬಂಧಿಸಿದ್ದು. ನಾನು ʼಅಜ್ಮೇರ್ ಶರೀಫ್ʼಗೆ ಹೋಗುವಷ್ಟೇ ಭಕ್ತಿಯಿಂದ ʼಬಾಂಗ್ಲಾ ಸಾಹೀಬ್ʼ ಮತ್ತು ಮಹಾಕಾಳ ದೇವಸ್ಥಾನಕ್ಕೂ ಹೋಗುತ್ತೇನೆ. ಮುಂದೆಯೂ ಇದೇ ರೀತಿ ದೇವಸ್ಥಾನಕ್ಕೆ ಹೋಗುತ್ತಲಿರುತ್ತೇನೆ. ನನ್ನ ನಡೆಯ ಬಗ್ಗೆ ಯಾವುದೇ ರೀತಿಯ ಟೀಕೆಗಳು ಬಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದಿದ್ದಾರೆ
ಇದೇ ವೇಳೆ ಸಾರಾ ಅವರನ್ನು ಬೆಂಬಲಿಸಿ ಮಾತನಾಡಿರುವ ವಿಕ್ಕಿ ಕೌಶಲ್, “ಮಾಧ್ಯಮದವರು ಟೀಕೆಗೆ ಒಳಗಾದ ವ್ಯಕ್ತಿಗಳನ್ನೇ ಪ್ರಶ್ನಿಸುವುದು ಸರಿಯಲ್ಲ. ಉದಾಹರಣೆಗೆ ನಾನು ನನ್ನ ಪಾಡಿಗೆ ಹಾದಿಯಲ್ಲಿ ಹೋಗುತ್ತಿದ್ದಾಗ ಯಾರಾದರೂ ನನ್ನನ್ನು ನಿಂದಿಸಿದರೆ, ನೀವು ನಿಂದಿಸಿದವರನ್ನು ಪ್ರಶ್ನೆ ಮಾಡಬೇಕೇ ಹೊರತು ನಿಂದನೆಗೆ ಒಳಗಾದವರನ್ನಲ್ಲ. ಈ ಶೈಲಿ ಬದಲಾಗಬೇಕು” ಎಂದು ಮನವಿ ಮಾಡಿದ್ದಾರೆ.