ಮೆಗಾಸ್ಟಾರ್ ಚಿರಂಜೀವಿ ಚೊಚ್ಚಲ ಚಿತ್ರ ನಿರ್ದೇಶಿಸಿದ್ದ ವಾಸು
ಜಗ್ಗೇಶ್ ನಟನೆಯ ʼಸರ್ವರ್ ಸೋಮಣ್ಣʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ
ತೆಲುಗಿನ ಹಿರಿಯ ನಿರ್ದೇಶಕ ಕೆ. ವಾಸು ಹೈದರಾಬಾದ್ನ ʼಕೀಮ್ಸ್ʼ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ವಾಸು ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಕುಟುಂಬಸ್ಥರು ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
60 ವರ್ಷದ ವಾಸು ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಿರ್ದೇಶಕನ ಅಗಲಿಕೆಗೆ ಖ್ಯಾತ ನಟರಾದ ಚಿರಂಜೀವಿ, ಪವನ್ ಕಲ್ಯಾಣ್ ಸೇರಿದಂತೆ ತೆಲುಗು ಚಿತ್ರರಂಗದ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿ, “ಹಿರಿಯ ನಿರ್ದೇಶಕ ಕೆ. ವಾಸು ಅವರು ಇನ್ನಿಲ್ಲ ಎಂಬ ಸುದ್ದಿ ತುಂಬಾ ನೋವುಂಟು ಮಾಡಿದೆ. ಸಿನಿ ಪಯಣದ ಆರಂಭದ ದಿನಗಳಲ್ಲಿ ನಾನು ನಟಿಸಿದ್ದ ʼಪ್ರಾಣಮ್ ಖರೀದುʼ, ʼತೋಡು ದೊಂಗಲುʼ, ʼಅಲ್ಲುಳ್ಲು ವಸ್ತುನ್ನಾರುʼ, ʼಕೋತಲ ರಾಯುಡುʼ ಚಿತ್ರಗಳನ್ನು ನಿರ್ದೇಶಿಸಿದ್ದರು” ಎಂದು ವಾಸು ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕುವ ಮೂಲಕ ಸಂತಾಪ ಸೂಚಿಸಿದ್ದಾರೆ.
1978ರಲ್ಲಿ ತೆರೆಕಂಡಿದ್ದ ʼಪ್ರಾಣಮ್ ಖರೀದುʼ ಚಿತ್ರವನ್ನು ನಿರ್ದೇಶಿಸುವ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದ ಕೆ. ವಾಸು, ಇದೇ ಚಿತ್ರದ ಮೂಲಕ ಚಿರಂಜೀವಿ ಅವರನ್ನು ಕೂಡ ಬಣ್ಣದ ಲೋಕಕ್ಕೆ ಪರಿಚಯಿಸಿದ್ದರು. ʼಶ್ರೀ ಶಿರಡಿ ಸಾಯಿಬಾಬಾ ಮಹಾತ್ಯಂʼ, ʼಆರಿನಿ ಮಂಟಲುʼ, ʼಇಂಟ್ಲೋ ಶ್ರೀಮತಿ ವೀದಿಲೋ ಕುಮಾರಿʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ವಾಸು, 1993ರಲ್ಲಿ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿ ಬಿಡುಗಡೆಯಾಗಿದ್ದ ಕನ್ನಡದ ʼಸರ್ವರ್ ಸೋಮಣ್ಣʼ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದರು.