ʼದಿ ಕೇರಳ ಸ್ಟೋರಿʼ ಚಿತ್ರ ನಿಷೇಧಿಸಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಚಿತ್ರದ ಪ್ರದರ್ಶನ ರದ್ದುಗೊಳಿಸಿದ್ದ ತಮಿಳನಾಡಿನ ಥಿಯೇಟರ್ ಮಾಲೀಕರು
ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನವನ್ನು ನಿಷೇಧಿಸಿ ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ವಿವಾದಕ್ಕೆ ಕಾರಣವಾಗಿರುವ ಮತಾಂತರದ ಅಂಶ ಆಧಾರಹಿತ ಎಂಬ ಸೂಚನೆಯನ್ನು ಚಿತ್ರದ ಜೊತೆಗೆ ಪ್ರದರ್ಶಿಸುವಂತೆ ನಿರ್ಮಾಪಕರಿಗೂ ತಾಕೀತು ಮಾಡಿದೆ.
ಗುರುವಾರ ಮೂರನೇ ಬಾರಿಗೆ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, “ಕಥಾಹಂದರದ ಕಾರಣಕ್ಕೆ ಚಿತ್ರವನ್ನು ನಿಷೇಧಿಸಿಲಾಗಿದೆ ಎಂಬ ಪಶ್ಚಿಮ ಬಂಗಾಳ ಸರ್ಕಾರದ ಸಮರ್ಥನೆ ಸರಿಯಲ್ಲ. ಹೀಗಾಗಿ ಚಿತ್ರದ ಮೇಲಿನ ನಿರ್ಬಂಧಕ್ಕೆ ತಡೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮಿಳುನಾಡು ಸರ್ಕಾರಕ್ಕೂ ಸೂಚನೆ ಹೊರಡಿಸಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು, “ರಾಜ್ಯದಲ್ಲಿ ʼದಿ ಕೇರಳ ಸ್ಟೋರಿʼ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಿಗೆ ಭದ್ರತೆ ಒದಗಿಸುವಂತೆ” ಆದೇಶಿಸಿದ್ದಾರೆ. ಜೊತೆಗೆ ವಿವಾದಕ್ಕೆ ಕಾರಣವಾಗಿರುವ 32 ಸಾವಿರ ಮಹಿಳೆಯರ ಮತಾಂತರದ ಅಂಶ ಆಧಾರ ರಹಿತ ಎಂಬ ಸೂಚನೆಯನ್ನು ಚಿತ್ರದ ಜೊತೆಗೆ ಪ್ರದರ್ಶಿಸುವಂತೆ ನಿರ್ಮಾಪಕರಿಗೆ ತಾಕೀತು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼದಹಾಡ್ʼ ವೆಬ್ ಸರಣಿಗೆ ಹಂತಕ ಸೈನೇಡ್ ಮೋಹನ್ ಕಥೆ ಸ್ಫೂರ್ತಿಯೇ?
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತ ಮೂಡಿಬಂದಿರುವ ʼದಿ ಕೇರಳ ಸ್ಟೋರಿʼ ಚಿತ್ರವನ್ನು ಮೇ 8ರಂದು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿತ್ತು. ತಮ್ಮ ರಾಜ್ಯದಲ್ಲಿ ದ್ವೇಷ ಹರಡುವುದನ್ನು ತಡೆಯಲು ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ, ಶಾಂತಿಯನ್ನು ಕಾಪಾಡಲು ಈ ಕ್ರಮ ಕೈಗೊಂಡಿರುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ಬಿಡುಗಡೆಗೂ ಮೊದಲೇ ವಿವಾದ ಸೃಷ್ಟಿಸಿದ್ದ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನಗಳನ್ನು ತಮಿಳುನಾಡಿನ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ಕೂಡ ರದ್ದುಗೊಳಿಸಿತ್ತು.
ಈ ಹಿನ್ನೆಲೆ “ʼನಮ್ಮ ಚಿತ್ರವನ್ನು ಪ್ರದರ್ಶಿಸದಂತೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದೆ. ತಮಿಳುನಾಡಿನಲ್ಲೂ ಅನಧಿಕೃತವಾಗಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರು ರಾಜ್ಯ ಸರ್ಕಾರಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.