- ಜೂನಿಯರ್ ಎನ್ಟಿಆರ್ಗೆ ಜೊತೆಯಾದ ಜಾಹ್ನವಿ ಕಪೂರ್
- ಚಿತ್ರತಂಡಕ್ಕೆ ಶುಭ ಹಾರೈಸಿದ ಪ್ರಶಾಂತ್ ನೀಲ್, ರಾಜಮೌಳಿ
ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ʼಆರ್ಆರ್ಆರ್ʼ ಸಿನಿಮಾದ ಯಶಸ್ಸಿನ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರ 30ನೇ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ಜೂನಿಯರ್ ಎನ್ಟಿಆರ್ ತಾವು ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ವಿಶೇಷ ಪೋಸ್ಟರ್ ಸಿನಿ ರಸಿಕರ ಕುತೂಹಲ ಕೆರಳಿಸಿತ್ತು. ಜೊತೆಗೆ ಬಾಲಿವುಡ್ನ ಬಹು ಬೇಡಿಕೆಯ ನಟಿ ಜಾಹ್ನವಿ ಕಪೂರ್ ಈ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನು ಕೂಡ ಚಿತ್ರತಂಡ ಬಹಿರಂಗ ಪಡಿಸಿತ್ತು.
ಗುರುವಾರ ಹೈದರಾಬಾದ್ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ಜರುಗಿದ್ದು, ಚಿತ್ರದ ನಾಯಕ ಜೂನಿಯರ್ ಎನ್ಟಿಆರ್, ನಾಯಕಿ ಜಾಹ್ನವಿ ಕಪೂರ್, ನಿರ್ದೇಶಕ ಕೊರಟಾಲ ಶಿವ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ಪ್ರಕಾಶ್ ರಾಜ್ ಸೇರಿದಂತೆ ಚಿತ್ರತಂಡದ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ‘ಆರ್ಆರ್ಆರ್’ ಖ್ಯಾತಿಯ ನಿರ್ದೇಶಕ ರಾಜಮೌಳಿ ಮತ್ತು ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರೀಕರಣಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಮುಹೂರ್ತದ ಬಳಿಕ ಮಾತನಾಡಿರುವ ಕೊರಟಾಲ ಶಿವ, “ಚಿತ್ರದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟ ಭಾರತದ ಕರಾವಳಿ ತೀರದ ಜನರ ಕಥೆಯನ್ನು ಹೇಳುವ ಪ್ರಯತ್ನದಲ್ಲಿದ್ದೇನೆ. ನಾಗರಿಕ ಪ್ರಪಂಚದ ಪರಿಚಯವೇ ಇರದ ಜನರ ಕಥೆ ಇದೆ. ನನ್ನ ವೃತ್ತಿ ಬದುಕಿನಲ್ಲಿ ಮೈಲಿಗಲ್ಲಾಗಿ ಉಳಿಯುಂಥ ಕಥೆ ಇದು” ಎಂದು ಚಿತ್ರದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಕೊರಟಾಲ ಶಿವ ಈ ಹಿಂದೆ ಜೂನಿಯರ್ ಎನ್ಟಿಆರ್ ನಟನೆಯ ʼಜನತಾ ಗ್ಯಾರೇಜ್ʼ ಚಿತ್ರವನ್ನು ನಿರ್ದೇಶಿಸಿದ್ದರು. ಕಡಲ ಕಥನದ ಮೂಲಕ ಈ ಹಿಟ್ ಜೋಡಿ ಮತ್ತೆ ಒಂದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಇನ್ನೂ ಹೆಸರಿಡದ ಈ ಚಿತ್ರ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿದ್ದು, ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿಖಾನ್ ಖಳನ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹರಿಕೃಷ್ಣ ಕೆ ಮತ್ತು ಸುಧಾಕರ್ ಮಿಕ್ಕಿಲಿನೇನಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ, 2024 ಏಪ್ರಿಲ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.