ಲಾಕ್ಡೌನ್ನಲ್ಲೂ ಜಾರಿಯಲ್ಲಿದ್ದ ಹೊಸ ಸಂಸತ್ ಭವನದ ಕಾಮಗಾರಿ
ಜನರ ಕಲ್ಯಾಣಕ್ಕಿಂತ ಪ್ರಚಾರ ಮುಖ್ಯ ಎಂದುಕೊಂಡವರದ್ದು ಹುಚ್ಚುತನ
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದೆಹಲಿಯ ಹೊಸ ಸಂಸತ್ ಭವನ ಭಾನುವಾರ ಉದ್ಘಾಟನೆಗೊಳ್ಳಲಿದೆ. ರಾಷ್ಟ್ರಪತಿಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಈ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡುತ್ತಿರುವುದಕ್ಕೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೇ ಹೊತ್ತಿನಲ್ಲಿ ಬಾಲಿವುಡ್ನ ಖ್ಯಾತ ಸಂಗೀತ ವಿಶಾಲ್ ದದ್ಲಾನಿ ನೂತನ ಸಂಸತ್ ಭವನದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸ ಸಂಸತ್ ಭವನದ ಬಗ್ಗೆ ಟ್ವೀಟ್ ಮಾಡಿರುವ ವಿಶಾಲ್ ದದ್ಲಾನಿ, “ಹೀಗೆ ಹೇಳುತ್ತಿರುದಕ್ಕೆ ಕ್ಷಮಿಸಿ. ಆದರೆ, ಅಗತ್ಯ ಆರೋಗ್ಯ ಸೇವೆಗಳು ಸಿಗದೆ ನೂರಾರು, ಸಾವಿರಾರು ಜನರು ಸಾಯುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರ 20 ಸಾವಿರ ಕೋಟಿ ಹಣದಿಂದ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ʼಪ್ರಜಾಪ್ರಭುತ್ವದ ಸಂಭ್ರಮಾಚರಣೆʼ ನಡೆಯುವುದಿಲ್ಲ. ಜನರ ಕಲ್ಯಾಣಕ್ಕಿಂತ ಪ್ರಚಾರವೇ ಮುಖ್ಯ ಎಂದುಕೊಂಡವರದ್ದು ಹುಚ್ಚುತನವಷ್ಟೇ” ಎಂದು ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ಪತ್ರಕರ್ತ ಆರ್ ಪ್ರಸಾದ್ ಎಂಬುವವರು ವಿಶಾಲ್ ಅವರ ಟ್ವೀಟ್ಗೆ ಧ್ವನಿಗೂಡಿಸಿ, “ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ಸಾವಿಗೀಡಾದರು. ದೆಹಲಿ ಕೂಡ ಲಾಕ್ಡೌನ್ ಆಗಿತ್ತು. ಎಲ್ಲ ನಿರ್ಮಾಣ ಕಾಮಗಾರಿಗಳನ್ನು ನಿರ್ಬಂಧಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ʼಸೆಂಟ್ರಲ್ ವಿಸ್ತಾʼ (ಹೊಸ ಸಂಸತ್ ಭವನ) ನಿರ್ಮಾಣ ಕಾಮಗಾರಿಯನ್ನು ಮಾತ್ರ ʼಅತ್ಯಗತ್ಯ ಸೇವೆʼ ಎಂದು ಘೋಷಿಸಲಾಯಿತು. ಈ ಕಟ್ಟಡದ ನಿರ್ಮಾಣಕ್ಕೆ ಜನರನ್ನು ಕರೆತರುವ ಸಲುವಾಗಿ 180 ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು” ಎಂದು ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡ ರೀತಿಯನ್ನು ವಿವರಿಸಿದ್ದಾರೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲೂ ನೂತನ ಸಂಸತ್ ಭವನದ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದ ಬಗ್ಗೆ ಪ್ರಸಾದ್ ಟ್ವೀಟ್ ಮಾಡುತ್ತಲೇ, ಆ ಟ್ವೀಟ್ ಅನ್ನು ಉಲ್ಲೇಖಿಸಿ ಮತ್ತೊಂದು ಟ್ವೀಟ್ ಮಾಡಿರುವ ವಿಶಾಲ್, “ಜನ ಬೀದಿಗಳಲ್ಲಿ ಸಾಯುತ್ತಿದ್ದ ಸಂದರ್ಭದಲ್ಲಿ ಈ ಕಟ್ಟಡದ ನಿರ್ಮಾಣ ಕಾರ್ಯವೇ ಸರ್ಕಾರಕ್ಕೆ ಮುಖ್ಯವಾಗಿತ್ತು. ನಿಜಕ್ಕೂ ದುರದೃಷ್ಟಕರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಚಾರಕಿಂತ ಪ್ರಚಾರವೇ ಮುಖ್ಯವೆಂದು ಭಾವಿಸುವ ಜನಪ್ರತಿನಿಧಿಗಳು ಇರುವವರೆಗೂ ದೇಶದ ಉದ್ಧಾರ ಅಸಾಧ್ಯ