ಶಾರುಖ್ ಖಾನ್‌ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?

Date:

  • ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ಗಳಿಸಿದ ಶಾರೂಖ್ ಖಾನ್ ನಟನೆಯ ಜವಾನ್
  • ಪ್ರಸ್ತುತ ದೇಶದ ಆಡಳಿತ ವೈಫಲ್ಯವನ್ನು ಪರೋಕ್ಷವಾಗಿ ಎತ್ತಿ ತೋರುವ ಶಾರುಖ್ ಸಿನಿಮಾ

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸುಮಾರು ಐದು ವರ್ಷಗಳ ಬಿಡುವಿನ ನಂತರ ಪಠಾಣ್ ಸಿನಿಮಾದ ಮೂಲಕ ‘ಕಮ್ ಬ್ಯಾಕ್’ ಮಾಡಿದ್ದರು. ಅದರ ಯಶಸ್ಸಿನ ಬೆನ್ನಿಗೇ ದಕ್ಷಿಣದ ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ ನಿನ್ನೆ ವಿಶ್ವದಾದ್ಯಂತ ಬಿಡುಗಡೆಗೊಂಡಿದೆ.

ಬಿಡುಗಡೆಗೊಂಡ ಮೊದಲ ದಿನವೇ ‘ಜವಾನ್’ 129.6 ಕೋಟಿ ಗಳಿಸಿದ್ದು, ಸಿನಿಮಾ ಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಈ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿದೆ.

ʼಜವಾನ್’ ನಿರ್ದೇಶಕ ತಮಿಳಿನ ಅಟ್ಲಿ. ನಾಯಕಿಯರಲ್ಲಿ ಒಬ್ಬರು ನಯನತಾರಾ. ಖಳನಾಯಕನ ಪಾತ್ರಧಾರಿ ವಿಜಯ್ ಸೇತುಪತಿ. ಸಂಗೀತ ನಿರ್ದೇಶನ ಮಾಡಿರುವುದು ಅನಿರುದ್ಧ ರವಿಚಂದರ್. ತಮಿಳಿನ ವಿಜಯ್ ನಟನೆಯ ‘ಮರ್ಸೆಲ್’, ‘ಬಿಗಿಲ್’ ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿದ್ದ ಜಿ.ಕೆ. ವಿಷ್ಣು ಕೂಡ ಜವಾನ್‌ನಲ್ಲಿ ಕೆಲಸ ಮಾಡಿದ್ದಾರೆ. ಇವರೆಲ್ಲರ ಜತೆಗೆ ಶಾರುಖ್ ಖಾನ್ ಹಾಗೂ ಹೆಣ್ಣುಮಕ್ಕಳು.

ದಕ್ಷಿಣ ಮತ್ತು ಉತ್ತರದವರು ಎಂದು ದೇಶದಲ್ಲಿ ಈಗಾಗಲೇ ಚರ್ಚೆಯಾಗುತ್ತಿರುವ ವಿಷಯಗಳ ಮಧ್ಯೆ ದಕ್ಷಿಣ ಮತ್ತು ಉತ್ತರದವರ ಜುಗಲ್ ಬಂದಿ ಈ ಸಿನಿಮಾ ಎನ್ನುವದರಲ್ಲಿ ಸಂಶಯವಿಲ್ಲ. ಹೀಗಾಗಿ, ಜವಾನ್ ಸಿನಿಮಾ ನಿರೀಕ್ಷೆಗೂ ಮೀರಿ ಸೂಪರ್ ಹಿಟ್ ಆಗಿದೆ.

‘ಜವಾನ್​’ ಸಿನಿಮಾದಲ್ಲಿ ಬಾಲಿವುಡ್​ ಮತ್ತು ದಕ್ಷಿಣ ಸಿನಿಮಾದ ಸಂಗಮ ಆಗಿದೆ. ಕಾಲಿವುಡ್​ನ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಈ ಚಿತ್ರದ ಮೇಕಿಂಗ್​ ಕೂಡ ಬಹುತೇಕ ದಕ್ಷಿಣದ ಶೈಲಿಯಲ್ಲಿದೆ.

‘ಜವಾನ್’ ಸಿನಿಮಾ ಹೆಚ್ಚು ಚರ್ಚೆಯಾಗುತ್ತಿರುವುದಕ್ಕೆ ಕಾರಣ- ಶಾರುಖ್ ಖಾನ್ ದೇಶದ ಕೆಲವು ಪ್ರಮುಖ ಸಮಸ್ಯೆಗಳನ್ನು ಹಾಗೂ ಪ್ರಸ್ತುತ ದೇಶದ ಆಡಳಿತ ವೈಫಲ್ಯವನ್ನು ಪರೋಕ್ಷವಾಗಿ ಚಿತ್ರದ ಮೂಲಕ ಬಿಂಬಿಸಿರುವುದು.

ಜವಾನ್ ಚಿತ್ರ ಕೇವಲ ಸಿನಿಮಾ ಅಲ್ಲ, ಇದು 2024ರ ಲೋಕಸಭೆ ಚುನಾವಣೆಯ ಮೊದಲು ಪ್ರಜ್ಞಾವಂತ ಭಾರತೀಯರ ಕಣ್ಣುಗಳನ್ನು ತೆರೆಸುವುದರಲ್ಲಿಯೂ ಪಾತ್ರ ವಹಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಚಿತ್ರವು ಪ್ರಸ್ತುತ ಕೇಂದ್ರದ ಆಡಳಿತದಲ್ಲಿ ಸಂಭವಿಸಿರುವ ಹಲವು ಸಮಸ್ಯೆಗಳನ್ನು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಎತ್ತಿ ತೋರಿಸಿದೆ.

ಸಿನಿಮಾದ ಆರಂಭದಲ್ಲೇ ಚೀನಾದವರು ಭಾರತದ ಗಡಿಯೊಳಗೆ ನುಗ್ಗುವ ದೃಶ್ಯ ಇತ್ತೀಚೆಗೆ ನಡೆಯುತ್ತಿರುವ ಭಾರತ-ಚೀನಾ ಗಡಿ ವಿವಾದವನ್ನು ಪ್ರೇಕ್ಷಕರಿಗೆ ನೆನಪಿಸದೆ ಇರದು.

ಇಡೀ ದೇಶವನ್ನು ಕಾಡುತ್ತಿರುವ ರೈತರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಎಲ್ಲೆಡೆ ಬೇರು ಬಿಟ್ಟಿರುವ ಭ್ರಷ್ಟಾಚಾರ ಮುಂತಾದ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಎಲ್ಲವನ್ನೂ ‘ಕಮರ್ಷಿಯಲ್’​ ಶೈಲಿಯಲ್ಲಿ ನಿರೂಪಿಸಲಾಗಿದೆ.

ಸರ್ಕಾರ ಹೇಗೆ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿ, ಸಣ್ಣಪುಟ್ಟ ಬಡ ರೈತರಿಗೆ ಕಿರುಕುಳ ನೀಡುತ್ತದೆ. ಹಾಗೂ ಅವರನ್ನು ಯಾವ ರೀತಿಯಲ್ಲಿ ಶೋಷಣೆ ಮಾಡುತ್ತದೆ ಎಂಬುದನ್ನು ಬಹಳ ‘ಎಮೋಷನಲ್’ ಆಗಿ ತೋರಿಸಲಾಗಿದೆ. ಇದು ನೋಡುಗರನ್ನು ಭಾವುಕತೆಗೆ ದೂಡುವುದಂತೂ ಸತ್ಯ.

ಸೈನಿಕರಿಗೆ ಪೂರೈಕೆ ಆಗುವ ಕಳಪೆ ಶಸ್ತ್ರಾಸ್ತ ಸೇರಿದಂತೆ ಅನೇಕ ವಿಚಾರಗಳು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಬಂದುಹೋಗಿವೆ. ಆದರೂ ಅದನ್ನೇ ಮತ್ತೊಮ್ಮೆ ‘ಜವಾನ್​’ ಸಿನಿಮಾದಲ್ಲಿ ಶಾರುಖ್ ಖಾನ್ ಮೂಲಕ ನಿರ್ದೇಶಕ ಅಟ್ಲಿ ಪ್ರೇಕ್ಷಕರ ಮುಂದಿರಿಸಿದ್ದಾರೆ.

ಸಿನಿಮಾದಲ್ಲಿ ಸಾನ್ಯಾ ಮಲ್ಹೋತ್ರಾ ತಾನು ಕೆಲಸ ಮಾಡುವ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳನ್ನು ಉಳಿಸಿಕೊಳ್ಳಲು ಆಕ್ಸಿಜನ್‌ಗಾಗಿ ಪರದಾಡುವ ದೃಶ್ಯ, ಯಾರಿಗೆ ಕರೆ ಮಾಡಿದರೂ ಪ್ರಯೋಜನವಾಗದೇ, ಕೊನೆಗೆ ಅವರಿವರ ಕಾಲಿಗೆ ಬಿದ್ದು ಆಕ್ಸಿಜನ್ ಸಿಲಿಂಡರ್ ತರುತ್ತಾರೆ. ಆದರೆ ಅಷ್ಟರಲ್ಲಿ ಹಲವು ಮಕ್ಕಳು ಮೃತಪಟ್ಟಿರುತ್ತವೆ. ಕೊನೆಗೆ ಮಕ್ಕಳ ಸಾವಿಗೆ ಆಕ್ಸಿಜನ್‌ ಕೊರತೆಯಲ್ಲ, ಆಕೆಯೇ ಕಾರಣ ಎಂದು ನ್ಯಾಯಾಲಯ ತೀರ್ಪು ನೀಡಿ, ಆಕೆಯನ್ನು ಜೈಲಿಗೆ ಕಳುಹಿಸುತ್ತದೆ.

ಈ ದೃಶ್ಯವನ್ನು ನೋಡುವಾಗ ಉತ್ತರ ಪ್ರದೇಶದ ಡಾಕ್ಟರ್ ಕಫೀಲ್ ಖಾನ್ ಪ್ರೇಕ್ಷಕರ ಮುಂದೆ ಬಂದು ಹೋಗುವುದಂತೂ ಸತ್ಯ. ಸಿನಿಮಾಗೆ ಇವರ ಕಥೆ ಪ್ರೇರಣೆಯಾಗಿದೆಯೋ ಇಲ್ಲವೋ ಎಂದು ಎಲ್ಲಿಯೂ ಕೂಡ ಚಿತ್ರತಂಡ ಹೇಳದಿದ್ದರೂ, ಆ ದೃಶ್ಯಾವಳಿಗಳು ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸುತ್ತವೆ.

ಸನ್ನಿವೇಶವೊಂದರಲ್ಲಿ “ಬೇಟೆ ಕೋ ಹಾತ್ ಲಗಾನೆ ಸೆ ಪೆಹಲೆ ಬಾಪ್ ಸೆ ಬಾತ್ ಕರ್” ಎಂಬ ಸಂಭಾಷಣೆಯು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದನ್ನು ಉಲ್ಲೇಖಿಸುತ್ತದೆ ಎಂದು ನೋಡುಗರಿಗೆ ಅನ್ನಿಸದಿರದು.

ಅಂತಿಮವಾಗಿ ಈ ದೇಶದ ಜನರು ಉತ್ತಮ ಆರೋಗ್ಯ ಮತ್ತು ಉತ್ತಮ ಶಿಕ್ಷಣದ ಭರವಸೆ ನೀಡುವ ನಾಯಕರಿಗೆ ಮತ ಹಾಕಬೇಕು ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಅಲ್ಲ ಎಂದು ಶಾರುಖ್ ಖಾನ್ ಹೇಳುವ ಡೈಲಾಗ್ ಬಿಜೆಪಿ ಸಹಿತ ಎಲ್ಲ ರಾಜಕೀಯ ಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತಿದೆ.

ಹೀಗಾಗಿಯೇ ಸದ್ಯ ಜವಾನ್ ಸಿನಿಮಾ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯ ವಸ್ತುವಾಗಿದೆ. ತೆಲುಗಿನಲ್ಲಿ ಬಾಹುಬಲಿ, ಕನ್ನಡದ ಕೆ ಜಿ ಎಫ್ ಸಿನಿಮಾಗಳು ದಕ್ಷಿಣದ ಸಿನಿಮಾ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದವು. ಆ ಬಳಿಕ ಬಂದ ಹಲವು ಬಾಲಿವುಡ್ ಸಿನಿಮಾಗಳು ಕಲೆಕ್ಷನ್ ಮಾಡುವಲ್ಲಿ ವಿಫಲಗೊಂಡಿದ್ದವು. ಇದನ್ನು ಕೂಡ ಪರೋಕ್ಷವಾಗಿ ಈ ಸಿನಿಮಾದಲ್ಲಿ ‘ಫೈಟಿಂಗ್ ಸೀನ್‌’ನಲ್ಲಿ ಉಲ್ಲೇಖಿಸಲಾಗಿದೆ.

ಸಿನಿಮಾದ ಕ್ಲೈ ಮ್ಯಾಕ್ಸ್‌ ಫೈಟಿಂಗ್ ಸೀನ್‌ನಲ್ಲಿ ಶಾರುಖ್ ಖಾನ್, ವಿಲನ್ ಪಾತ್ರ ಮಾಡಿರುವ ವಿಜಯ್ ಸೇತುಪತಿಗೆ ಹೊಡೆಯಲು ಮುಂದಾಗುತ್ತಾನೆ. ಆಗ ಶಾರುಕ್ ಹಿಂಬದಿಯಲ್ಲಿ ಒಬ್ಬ ಆಜಾನುಬಾಹು ವ್ಯಕ್ತಿ ತಡೆಯುತ್ತಾನೆ. ಅವನ ಉದರ ಭಾಗದವರೆಗೆ ಮಾತ್ರ ಎತ್ತರವಿದ್ದ ಶಾರುಖ್, ತಕ್ಷಣವೇ ‘ಓಹೋ… ಬಾಹುಬಲಿ?’ ಎಂಬ ಅಚ್ಚರಿಯ ಉದ್ಗಾರ ಹೊರಡಿಸುತ್ತಾರೆ. ಇದು ಪ್ರೇಕ್ಷಕನನ್ನು ನಗೆಗಡಲಲ್ಲಿ ತೇಲಿಸಿದರೂ, ಇಡೀ ಬಾಲಿವುಡ್‌ನ ‘ಶ್ರೇಷ್ಠತೆ’ಗೆ ಹಲವು ರೀತಿ ಪೆಟ್ಟು ನೀಡಿದ್ದ ತೆಲುಗಿನ ‘ಬಾಹುಬಲಿ’ ಸಿನಿಮಾಗೆ ಕೊಟ್ಟ ಟಾಂಗ್ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಉತ್ತರದವರಿಗೆ ದಕ್ಷಿಣದ ಬಗ್ಗೆ ಸದಾ ಒಂದು ತಾತ್ಸಾರ ಭಾವನೆ ಇರುತ್ತದೆ. ಅದು ಹಿಂದಿ ಚಿತ್ರಗಳಲ್ಲೂ ವ್ಯಕ್ತವಾಗುತ್ತದೆ. ವಿಶೇಷ ಅಂದರೆ, ‘ಜವಾನ್‌’ನ ನಿರ್ದೇಶಕ ದಕ್ಷಿಣದವರು. ಇನ್ನು ಈ ಚಿತ್ರದ ಮುಖ್ಯ ತಂತ್ರಜ್ಞರು, ಮುಖ್ಯ ಕಲಾವಿದರು ಎಲ್ಲರೂ ದಕ್ಷಿಣದವರೇ. ಹೀಗೆ ದಕ್ಷಿಣದವರನ್ನೇ ಬಳಸಿಕೊಂಡು ಶಾರುಖ್, ದಕ್ಷಿಣದವರಿಗೆ ‘ಜಾಡಿಸಿದ್ದಾರೆ’ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಆದರೆ, ಜವಾನ್ ಹಲವು ಕಾರಣಗಳಿಗೆ ಮುಖ್ಯವಾಗುತ್ತದೆ. ಆಡಳಿತ ಪಕ್ಷದ ‘ಮೌತ್ ಪೀಸ್’ ಆಗಿ ಕಾರ್ಯನಿರ್ವಹಿಸಿದ ಬಾಲಿವುಡ್‌ನ ಕೆಲ ನಿರ್ದೇಶಕರು, ಒಂದು ಸಮುದಾಯವನ್ನು ಅಥವಾ ಧರ್ಮವನ್ನು ಗುರಿಯಾಗಿರಿಸಿಕೊಂಡು ‘ದಿ ಕೇರಳ ಸ್ಟೋರಿ’, ‘ಕಾಶ್ಮೀರ್ ಫೈಲ್ಸ್‌’ನಂತಹ ಸಿನಿಮಾಗಳನ್ನು ತಂದರು. ಅದರ ಮೂಲಕ ದ್ವೇಷವನ್ನು ಹರಡುವಲ್ಲಿಯೂ ಸಫಲವಾಗಿದ್ದರು. ಇದರಿಂದಾಗಿ ಕೋಟ್ಯಂತರ ರೂ. ಗಳಿಸಿ ಕೂಡ ಸುದ್ದಿಯಾಗಿದ್ದರು. ಆಗ ಬಾಲಿವುಡ್ ಕೂಡ ರಾಜಕೀಯ ಪಕ್ಷವೊಂದರ ‘ಪ್ರೊಪಗಾಂಡ’ ಹರಡುವ ವೇದಿಕೆಯಾಗಿ ಗುರುತಿಸಿಕೊಂಡಿತ್ತು, ಸುದ್ದಿಯಾಗಿತ್ತು.

ಅಂತಹ ಬೆಳವಣಿಗೆಗಳ ಮಧ್ಯೆ ‘ಜವಾನ್’ ಸಿನಿಮಾ ದೇಶದಲ್ಲಾಗುತ್ತಿರುವ ಎಲ್ಲ ಬೆಳವಣಿಗೆಯ ಬಗ್ಗೆ ಪರೋಕ್ಷವಾಗಿ ಮಾತನಾಡುವ ಮೂಲಕ ಬೇರೆಯೇ ಸಾಲಿನಲ್ಲಿ ನಿಲ್ಲುತ್ತದೆ. ಈ ಕಾರಣಕ್ಕಾಗಿಯೇ ಅದು ಇವತ್ತು ರಾಜಕೀಯ ಚರ್ಚೆಗೂ ವೇದಿಕೆಯೊದಗಿಸಿದೆ.

‘ಜವಾನ್‌’ನ ಮೂಲಕ ದೇಶದ ಜನರ ಪರವಾಗಿ, ಸಮಸ್ಯೆಗಳ ಬಗ್ಗೆ ಪರೋಕ್ಷವಾಗಿ ಶಾರುಖ್ ಖಾನ್ ಮಾತನಾಡಿದ್ದಾರೆ ಎಂಬುದು ಸಿನಿಮಾ ಪ್ರಿಯರ ಅಭಿಮತ. ಜವಾನ್ ನೋಡಿಲ್ಲದಿದ್ದರೆ ಒಮ್ಮೆ ನೋಡಿ. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇದಾವುದು ಹೊಸ ಧರ್ಮ, ಸನಾತನ ಎಂದು ಪ್ರಶ್ನಿಸಿದ ಬಹುಭಾಷಾ ನಟ ಕಿಶೋರ್ ಕುಮಾರ್

ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ ಮನುಷ್ಯರನ್ನು ಮನುಷ್ಯರಾಗಿ...

‘ನಟಿ ರಮ್ಯಾ ಹೃದಯಾಘಾತದಿಂದ ನಿಧನ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು!

ಸುದ್ದಿ ನಿಜವೆಂದು ತಿಳಿದು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದ ಹಲವಾರು ನೆಟ್ಟಿಗರು 'ಅವರು...

ಚಿಕ್ಕಮಗಳೂರು | ಬೈಕ್‌ಗೆ ಕಾರು ಢಿಕ್ಕಿ; ಕಾರು ನಟ ಚಂದ್ರಪ್ರಭಗೆ ಸೇರಿದ್ದೆಂದು ಆರೋಪ

ಚಿಕ್ಕಮಗಳೂರಿನಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಅಪಘಾತವಾಗಿರುವ ಘಟನೆ ನಡೆದಿದೆ....

‘ಭಾರತ್‌ ಮಾತಾ ಕೀ ಜೈ’ ಎಂದ ಅಮಿತಾಭ್ ಬಚ್ಚನ್; ನೆಟ್ಟಿಗರಿಂದ ತರಾಟೆ

ಜಿ20 ಶೃಂಗಸಭೆಯ ವೇಳೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ...