ಹರಿತ ಪದಪ್ರತಿಮೆಗಳನ್ನು ಅನಾಯಾಸವಾಗಿ ಕಟ್ಟುವ ಕವಿ ರಮೇಶ ಅರೋಲಿ. ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಸದ್ಯ ದಿಲ್ಲಿಯಲ್ಲಿ ಮೇಷ್ಟ್ರು. ಕವಿತೆಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಅರೋಲಿ ಅವರ ಇತ್ತೀಚಿನದೊಂದು ಕವಿತೆ ಇಲ್ಲಿದೆ
ಊರ ಮೇರೆಗೆ ನಿಂತ ಓ ಹನುಮ ದೇವರೆ,
ಸಾಮ್ರಾಜ್ಯದ ಸೈಜುಗಲ್ಲು ಆಕಾರ ಪಡೆಯುವ ಮುನ್ನ
ನನ್ನ ಬೆನ್ನಿಗೆ ಭೂಮಂಡಲ ಹೊರಿಸಲಾಗಿತ್ತು
ಉಳಿ, ಚೆನ್ನಿ, ಸುತ್ತಿಗೆ ಚೂಪಾಗುವ ಮುನ್ನ
ನನ್ನ ಕಣ್ಣೀರನ್ನು ಗೋರಿಯಲಿ ಹೂತಿಡಲಾಗಿತ್ತು
ಮತ್ತೀಗ ನಾಯಿ ನಾಲಗೆ ಮೇಲೆ ಮಚ್ಛೆ ಬಿಡಿಸುತ್ತಿರುವ
ನಕಲಿ ಲಿಪಿಕಾರನ ಬದನೆಕಾಯಿಯ ಪ್ರಮೇಯಕ್ಕೆ
ನನ್ನವಿಷ್ಟೇ ಸವಾಲು…
ಅಖಾಡಕ್ಕೆ ಮಣ್ಣು ಹೊತ್ತು ತಂದವರ ಗುಂಪಲ್ಲಿ
ನನ್ನ ಹೆಬ್ಬೆರಳ ನಿಶಾನೆಯನು ಅಳಿಸಿಹಾಕಿದವರಾರು?
ನನ್ನ ಹೆಜ್ಜೆ ಗುರುತಿನ ಕುರಿತು ಮೈಕಿಗಷ್ಟೇ ಕೇಳಿಸುತ್ತಿರುವವನಿಗೆ
ನನ್ನ ನಿಟ್ಟುಸಿರಿನ ಮುಟ್ಟುಗೋಲಿಗೆ ಮುಂದಾದವರ ಸುಳಿವಿಲ್ಲವೇ?
ನನ್ನ ರೆಕ್ಕೆ ಮುರಿದು ಕಿರೀಟಕ್ಕೆ ಗರಿ ಮಾಡಿಕೊಂಡವನಿಗೆ
ಇಷ್ಟಕ್ಕೂ ನಿನ್ನ ಕಟಕಟೆಯಲ್ಲಿ ವಿಚಾರಣೆ ಇದೆಯಾ?
ವಾಲಿ ದೇವನೆ, ಈ ಗರಡಿಮನೆ ಮಣ್ಣಿನ ಮೇಲಾಣೆ
ಮೈದಾನವಾದರೇನು? ರಾಮಲೀಲಾ ಮೈದಾನವಾದರೇನು?
ನಾನೊಂದು ನಿರಾಯುಧ ಕಂಬನಿ ಅಂದುಕೊಂಡವನ
ತೊಡೆ ಹುಡಿಯಾಗುವ ಕಡೇದಿನ ಬಾರದಿದ್ದರೆ ಕೇಳು
ನನ್ನೆರಡು ಭುಜಗಳನ್ನು ನಿನ್ನ ಮಟ್ಟಿಗೆ ಅರ್ಪಿಸುತ್ತೇನೆ!
ಈ ಕತೆ ಓದಿದ್ದೀರಾ?: ವಾರಕ್ಕೊಂದು ಕತೆ | ಶಿವಕುಮಾರ ಮಾವಲಿ ಅವರ ‘ಬಾಲ್ಕನಿ ಬೆಡಗಿ’
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ