ಕರ್ನಾಟಕದಲ್ಲಿ ಡೆಂಗಿ ಸೋಂಕಿತರ ಸಂಖ್ಯೆ 2022 ಮೇ 15ರಿಂದ ಇಲ್ಲಿಯವರೆಗೂ 1,716 ಪ್ರಕರಣಗಳು ವರದಿಯಾಗಿದೆ. ಅದಲ್ಲದೆ, ಮೇ 16 ರಾಷ್ಟ್ರೀಯ ಡೆಂಗಿ ದಿನ ಆಚರಿಸುತ್ತಿರುವ ಕಾರಣ ಡೆಂಗಿ ಜ್ವರದ ಬಗ್ಗೆ ಎಚ್ಚರವಿರಲಿ ಎಂದು ಪ್ರಕಟಣೆ ಹೊರಡಿಸಿದೆ
ಡೆಂಗಿ ಜ್ವರದಿಂದಾಗುವ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅನುಸರಿಸಬೇಕಾದ ಮತ್ತು ಪಾಲಿಸಬಾರದ ಕ್ರಮದ ಬಗ್ಗೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ದೇಶದಲ್ಲಿ ಪ್ರತಿ ವರ್ಷ ಮೇ 16ರಂದು ‘ರಾಷ್ಟ್ರೀಯ ಡೆಂಗಿ ದಿನ’ವನ್ನು ಆಚರಿಸಲಾಗುತ್ತದೆ. ಅದಲ್ಲದೆ ಬೇಸಿಗೆ ಸಮಯದಲ್ಲಿ ಡೆಂಗಿ ಪ್ರಕರಣಗಳು ಬಹುತೇಕ ಹೆಚ್ಚಳವಾಗುವ ಸಂಭವವೂ ಇರುವ ಕಾರಣ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಬಿಡುಗಡೆ ಮಾಡಿದೆ.
ಬೆಂಗಳೂರಿಗರನ್ನು ಹೆಚ್ಚು ಕಾಡುವ ಡೆಂಗಿ ಜ್ವರ, ಮೇ ಮತ್ತು ಡಿಸೆಂಬರ್ ಈ ಪ್ರಕರಣಗಳು ಹೆಚ್ಚಾಗುತ್ತವೆ ಮತ್ತು ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಗರಿಷ್ಠ ಮಟ್ಟವನ್ನು ತಲುಪುತ್ತವೆ ಎನ್ನಲಾಗಿದೆ. ಡೆಂಗಿ ಬಾಧಿತರಲ್ಲಿ ಯಾವುದೇ ರೋಗ ಲಕ್ಷಣ ಹೆಚ್ಚಾಗಿ ಕಂಡುಬರುವುದಿಲ್ಲ. 7 ದಿನಗಳ ಬಳಿಕ ಒಂದೊಂದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ತುರಿಕೆ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ಸೊಳ್ಳೆಗಳ ಅಧಿಕ ಉತ್ಪತ್ತಿಗೆ ಕಾರಣವೇನು?
ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಇವುಗಳು ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಜ್ವರವು ಸಾಮಾನ್ಯ ಜ್ವರ, ಡೆಂಗೆ ಹೆಮೊರೈಜಿನ್ (ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು) ಮತ್ತು ಡೆಂಗೆ ಶಾಕ್ ಸಿಂಡ್ರೋಮ್ (ದೇಹದಲ್ಲಿ ರಕ್ತ ಸ್ರಾವವಾಗಿ ರೋಗಿ ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆಗಳಿರುತ್ತವೆ) ಎಂಬ ಮೂರು ಹಂತಗಳಲ್ಲಿಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರೋಗಿಗೆ ರಕ್ತ (ಪ್ಲೇಟ್ಲೆಟ್ಸ್) ನೀಡುವುದು ಅನಿವಾರ್ಯವಾಗುತ್ತದೆ.
ಈ ಸುದ್ದಿ ಓದಿದ್ದೀರಾ?: ರೋಗಿಗೆ ಜನೌಷಧವನ್ನೇ ಸೂಚಿಸಿ: ಆರೋಗ್ಯ ಸಚಿವಾಲಯ
ಡೆಂಗಿ ಜ್ವರ ನಿಯಂತ್ರಣ ಅನುಸರಿಸಬೇಕಾದ ಕ್ರಮ
ಮನೆಯಲ್ಲಿ ತೊಟ್ಟಿ, ಬ್ಯಾರೆಲ್, ಡ್ರಂಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು ಪುನಃ ನೀರು ತುಂಬಿಸುವುದು. ಮತ್ತು ತೊಟ್ಟಿ. ಬ್ಯಾರೆಲ್, ಡ್ರಂಗಳನ್ನು ಯಾವಾಗಲೂ ಮುಚ್ಚಿಡುವುದು. ಮನೆಯ ಸುತ್ತ ಮುತ್ತ ಬಿಸಾಡಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಛೇರಿ ಹಾಗೂ ಸಂಸ್ಥೆಗಳ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಈಡಿಸ್ ಸೊಳ್ಳೆಯ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
ರೋಗ ಲಕ್ಷಣ ಕಂಡು ಬಂದರೆ ಪಾಲಿಸಬೇಕಾದ ಕ್ರಮ
ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿತರು ತಣ್ಣೀರನ್ನು ಕುಡಿಯಲೇಬಾರದು. ಸ್ನಾನಕ್ಕೂ ಬಿಸಿನೀರನ್ನೇ ಬಳಸಿ. ತಲೆ ಸ್ನಾನದಿಂದ ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು.