- ಜಾಗತಿಕ ಲಿಂಗಾಯತ ಮಹಾಸಭೆಗೆ ಸ್ಪಷ್ಟ ರಾಜಕೀಯ ನಿಲುವು ಏಕಿಲ್ಲ?
- ಇಲ್ಲದಿರುವುದರಿಂದಲೇ ಅದು ಬಲಾಢ್ಯ ಪಕ್ಷದ ಬಾಲಂಗೋಚಿಯಾಗಿದೆ
ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆಂದು ಬೀಗುವ ಜಾಗತಿಕ ಲಿಂಗಾಯತ ಮಹಾಸಭೆಯು ತನ್ನದೇ ಸಮುದಾಯದ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಬಂಧನ ಕುರಿತು ವಹಿಸಿರುವ ಮೌನದ ಕುರಿತು ಪ್ರಶ್ನೆಗಳೆದ್ದಿವೆ.
ಅಖಿಲ ಭಾರತ ವೀರಶೈವ ಮಹಾಸಭೆಯ ಧಾರ್ಮಿಕ ನಿಲುವು ನಿಚ್ಚಳವಿಲ್ಲದಿದ್ದರೂ, ಅದರ ರಾಜಕೀಯ ನಿಲುವು ಸ್ಪಷ್ಟವಾಗಿದೆ. ಆದರೆ ಜಾಗತಿಕ ಲಿಂಗಾಯತ ಮಹಾಸಭೆಗೆ ಒಂದು ಸ್ಪಷ್ಟವಾದ ರಾಜಕೀಯ ನಿಲುವೇ ಇಲ್ಲ. ಹಾಗಾಗಿಯೇ ಈ ಸಂಘಟನೆಯ ಕೆಲ ಮುಖಂಡರು ಸಾರ್ವಜನಿಕವಾಗಿಯೇ ಕೇಸರಿ ಶಾಲು ಧರಿಸಿ, ಬಿಜೆಪಿ ಟಿಕೆಟಿಗಾಗಿ ಸಂಘಪರಿವಾರಕ್ಕೆ ಕಾಲಿಟ್ಟಿದ್ದಾರೆ ಎಂದು ಲಿಂಗಾಯತ ಹೋರಾಟಗಾರ ಸಿದ್ದಪ್ಪ ಮೂಲಗೆ ಟೀಕಿಸಿದ್ದಾರೆ.
ಅದು ಯಾವುದೇ ಸಂಘಟನೆಯಾಗಿರಲಿ ಅದಕ್ಕೊಂದು ಸ್ಪಷ್ಟ ರಾಜಕೀಯ ನಿಲುವು ಇರಲಿಲ್ಲವೆಂದರೆ ಅದು ಬಲಾಢ್ಯ ಪಕ್ಷದ ಬಾಲಂಗೋಚಿಯಾಗಿದೆ ಎಂದರ್ಥ. ರಾಜಕೀಯ ನಿಲುವೇ ನಮ್ಮ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಆರ್ಥಿಕ ನಿಲುವನ್ನು ನಿರ್ಧರಿಸುತ್ತದೆ.
ಹನ್ನೆರಡನೆಯ ಶತಮಾನದಲ್ಲಿ ಸಮಾನತೆಯ ಕನಸು ಕಂಡಿದ್ದ ಬಸವಾದಿಗಳ ಹತ್ಯಾಕಾಂಡ ನಡೆದದ್ದು ಅವು ರಾಜಕೀಯ ಹತ್ಯೆಗಳಲ್ಲವೇ? ಎಂ ಎಂ ಕಲಬುರ್ಗಿಯವರದು ರಾಜಕೀಯ ಹತ್ಯೆಯಲ್ಲವೇ? ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರು. ಹಾಗಾಗಿ ಅವರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದು ರಾಜಕೀಯ ನಿರ್ಧಾರ ಆಗಿರಲಿಲ್ಲವೇ?
ಒಂದು ಚುನಾಯಿತ ಸರ್ಕಾರದ ಕ್ಯಾಬಿನೆಟ್ ನಿಂದ ಹೋಗಿರುವ ಅರ್ಜಿಯನ್ನು ಕನಿಷ್ಠ ಸಂಸತ್ತಿನಲ್ಲಿಟ್ಟು ಚರ್ಚೆಯೂ ನಡಸದೆ ಅರ್ಜಿಯನ್ನು ತಿರಸ್ಕರಿಸಿದ್ದು/ ಅರ್ಜಿಯನ್ನು ವಾಪಸ್ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು ಅದು ಬಿಜೆಪಿಯ ರಾಜಕೀಯ ನಿಲುವು ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಬದುಕಿನ ಹಾಗೂ ದೇಶದ ಎಲ್ಲ ಆಗುಹೋಗುಗಳನ್ನು ನಿರ್ಧರಿಸುವುದು ರಾಜಕೀಯವೇ. ಈ ದೇಶದಲ್ಲಿ ಕೋಮುವಾದ ಬಾನೆತ್ತರಕ್ಕೆ ಬೆಳೆದದ್ದು, ಇಲ್ಲಿ ಬಡತನ ಹಾಸುಹೊಕ್ಕಾಗಿ ಹರಡಿದ್ದು, ಬಡಜನತೆಗೆ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಗಗನಕುಸುಮ ಆಗಿದ್ದರ ಹಿಂದೆ ನಿರ್ದಿಷ್ಟ ರಾಜಕಾರಣವಿದೆ. ಯುದ್ಧಕ್ಕೆ ಹೊರಟಾಗ ಶತ್ರುಗಳನ್ನು ಗುರುತಿಸಲು ಸೋತರೆ ನಾವು ಬೀಸಿದ ಕತ್ತಿಗೆ ನಾವೇ ಬಲಿಯಾಗುವ ಅಪಾಯವಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಚೇತನ್ ಅಹಿಂಸಾ ಅವರ ಬಿಡುಗಡೆಗೆ ವೈಯಕ್ತಿಕ ನೆಲೆಯಲ್ಲಿ ತಾವು ಎಲ್ಲ ಪ್ರಯತ್ನಗಳನ್ನು ನಡೆಸಿರುವುದಾಗಿ ಜಾಗತಿಕ ಲಿಂಗಾಯತ ಮಹಾಸಭೆಯ ಮುಂದಾಳುಗಳಲ್ಲಿ ಒಬ್ಬರಾದ ಜಿ.ಬಿ.ಪಾಟೀಲ್ ಅವರು ‘ಈ ದಿನ’ಕ್ಕೆ ತಿಳಿಸಿದ್ದಾರೆ.