ಕರ್ನಾಟಕದ 224 ಕ್ಷೇತ್ರಗಳ ಪೈಕಿ ಭಾರೀ ಕುತೂಹಲಕ್ಕೆ ಕಾರಣವಾದ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ಕೂಡಾ ಒಂದು. ಕ್ಷೇತ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದಾಗಿ ಭಾರಿ ಪ್ರಬಲ ತ್ರಿಕೋನ ಸ್ಪರ್ಧೆಯಿಂದ ಕುತೂಹಲ ಮೂಡಿಸಿದ್ದ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಸುಮಾರು ಮೂರು ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆಶಾ ಗೌಡ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಪುತ್ತೂರು ಕ್ಷೇತ್ರದಲ್ಲಿ ಒಟ್ಟು ಶೇ. 79.91 ಮತದಾನವಾಗಿತ್ತು. ಮೂಲ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಾದ ಅರುಣ್ ಕುಮಾರ್ ಪುತ್ತಿಲ ಅವರು ಕಮಲದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅರುಣ್ ಕುಮಾರ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ನಡುವಿನ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಪುತ್ತೂರು ಕ್ಷೇತ್ರವನ್ನು ಬಿಜೆಪಿ ಕಳೆದುಕೊಳ್ಳಲು ಸ್ವಯಂಕೃತಾಪರಾಧವೇ ಕಾರಣ ಎನ್ನಬಹುದು. ಆರಂಭದಲ್ಲಿ ಅಭ್ಯರ್ಥಿ ಆಯ್ಕೆಯಲ್ಲೇ ಮುಗ್ಗರಿಸಿತ್ತು. ಅಭ್ಯರ್ಥಿ ಆಯ್ಕೆಯ ನಂತರ ಪಕ್ಷದ ಕಾರ್ಯಕರ್ತರು ಮತ್ತು ಇತರ ಮುಖಂಡರ ನಡುವಿನ ಬಂಡಾಯ ಹತ್ತಿಕ್ಕುವಲ್ಲಿ ವಿಫಲವಾಯಿತು. ಆದರೆ ಅಶೋಕ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಲೇ, ಇತರ ಆಕಾಂಕ್ಷಿಗಳನ್ನು ಸಂಪರ್ಕಿಸಿ ತಮ್ಮ ವಿರೋಧಿಗಳ ಮನವೊಲಿಸಿ ಒಗ್ಗಟ್ಟಿನ ಹೋರಾಟ ಮುಂದಿಡುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಕುಂತಲಾ ಶೆಟ್ಟಿ ಮತ್ತಿತರ ಮನವೊಲಿಸುವುದು ಸುಲಭವಾಗಿರಲಿಲ್ಲ. ಆದರೆ, ಅಶೋಕ್ ರೈ ತಮ್ಮ ಕುಶಲ ರಾಜಕೀಯ ತಂತ್ರಗಾರಿಕೆಯನ್ನು ಬಳಸಿಕೊಂಡಿದ್ದರು.
ಬಿಜೆಪಿ ಅಭ್ಯರ್ಥಿ ಆಶಾ ಗೌಡ ಮತ್ತು ಅವರ ಬೆಂಬಲಿಗರಿಂದ ಅಂತಹ ಪ್ರಯತ್ನವಾಗಲಿಲ್ಲ. ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯ ಮನವೊಲಿಕೆಗೆ ಬಾಗಲಿಲ್ಲ. ಬಿಜೆಪಿ ಕಾರ್ಯಕರ್ತರೊಬ್ಬರು ಹೇಳುವಂತೆ, ಸ್ವತಃ ಅಮಿತ್ ಶಾ ಅವರೇ ಪುತ್ತಿಲ ಅವರಿಗೆ ಕರೆ ಮಾಡಿ ಬಂಡಾಯ ಶಮನಕ್ಕೆ ಯತ್ನಿಸಿದರೂ ಪ್ರಯತ್ನ ಕೈಗೂಡಿರಲಿಲ್ಲ.