- ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ಏಕೆ ತಡೆದಿದ್ದೀರಿ: ಪ್ರಶ್ನೆ
- ಗ್ಯಾರಂಟಿ ಬಗ್ಗೆ ಷರತ್ತು ವಿಧಿಸಿದರೆ ಜೂನ್ 1ರಿಂದ ಹೋರಾಟ: ಎಚ್ಚರಿಕೆ
ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೂಡಲೇ ಆ ಬಗ್ಗೆ ತನಿಖೆಗೆ ಆದೇಶಿಸಲಿ. ತಪ್ಪು ಮಾಡಿದವರನ್ನು ಶಿಕ್ಷಿಸಿ, ನಾನೇ ನಿಮ್ಮ ಕಾಲಿಗೆ ನಮಸ್ಕರಿಸುವೆ. ಕಮಿಷನ್ ಪಡೆದವರನ್ನು ಜೈಲಿಗೆ ಕಳಿಸುವ ಹೊಣೆ ನಿಮ್ಮದು. ಇಲ್ಲದಿದ್ರೆ ನೀವು ಹೇಳಿದ್ದು ಸುಳ್ಳು ಅಂತಾಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ಏಕೆ ತಡೆದಿದ್ದೀರಿ. ಎಷ್ಟು ಪರ್ಸೆಂಟ್ ಕಮಿಷನ್ಗಾಗಿ ಕಾಯುತ್ತಿದ್ದೀರಾ” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ನವರ ಮುಖ ನೋಡಿ ರಾಜ್ಯದ ಜನತೆ ಮತ ಹಾಕಿಲ್ಲ. ಅವರು ಘೋಷಿಸಿರುವ ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ. ಕೊಟ್ಟ ಭರವಸೆ ಈಡೇರಿಸಿ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ” ಎಂದರು.
“ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕುರಿತು ಯಾವುದೇ ಷರತ್ತುಗಳ ಬಗ್ಗೆ ಉಲ್ಲೇಖಿಸಿಲ್ಲ. ಗ್ಯಾರಂಟಿಗಳ ಜಾರಿ ಬಗ್ಗೆ ಜೂನ್ 1ರವರೆಗೆ ಕಾಯುತ್ತೇವೆ. ಷರತ್ತುಗಳು ಇಲ್ಲದೆ ಗ್ಯಾರಂಟಿಗಳನ್ನು ಜಾರಿಮಾಡಬೇಕು. ಒಂದು ವೇಳೆ ಷರತ್ತು ವಿಧಿಸಿದರೆ ಜೂನ್ 1ರಿಂದ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಯೋಗಿ ಸಿಎಂ ಆದ ನಂತರ ರಾಜ್ಯದಲ್ಲಿ 15 ದಿನಕ್ಕೊಂದು ಎನ್ಕೌಂಟರ್
“ಗ್ಯಾರಂಟಿ ಕಾರ್ಡ್ ಅಲ್ಲಿ ಕಂಡೀಷನ್ ಅಪ್ಲೈ ಅಂತಾ ಎಲ್ಲೂ ಹಾಕಿಲ್ಲ. ಎಲ್ಲ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಯಾರು ಕಟ್ಟಬೇಡಿ” ಎಂದರು.
“ಸಿದ್ದರಾಮಯ್ಯ ಅಥವಾ ನಾನು ಯಾರು ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಅನ್ನೋದು ಯಾರ ಸ್ವತ್ತಲ್ಲ. ಆದರೆ ಪೊಲೀಸ್ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ. ವಿಧಾನಸೌಧದದಲ್ಲಿ ಕೂತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ? ಮೊದಲು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವುದು ನಿಲ್ಲಿಸಿ ಎಂದು ಪ್ರತಾಪ ಸಿಂಹ ವಾಗ್ದಾಳಿ ಮಾಡಿದರು.
“ಈ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಅನ್ನೋದು ಕನ್ನಡಿಗರಿಗೆ ಗೊತ್ತಿದೆ” ಎಂದರು.