- ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಮನೆಯಲ್ಲಿ ಘಟನೆ
- ₹450 ಬೆಲೆಯ ಕುಕ್ಕರ್ ಮೇಲೆ ₹1,399 ಲೇಬಲ್ ಅಂಟಿಸಿದ್ದ ಆರೋಪ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಉಡುಗೊರೆಯಾಗಿ ನೀಡಿದ್ದ ಕುಕ್ಕರ್ ಸ್ಫೋಟಗೊಂಡಿರುವ ಘಟನೆ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ನಡೆದಿದೆ. ಕಳಪೆ ಕುಕ್ಕರ್ ನೀಡಿದ್ದಕ್ಕಾಗಿ ಶಾಸಕರ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ಉಡುಗೊರೆಗಳನ್ನು ನೀಡುವುದು ಜೋರಾಗಿ ನಡೆಯುತ್ತಿದೆ ಎಂಬ ಆರೋಪಗಳೂ ಇವೆ.
ಮತದಾರರಿಗೆ ಹಣ, ಹೆಂಡ, ಒಡವೆ, ಸೀರೆ, ಟಿವಿ ಹೀಗೆ ನಾನಾ ಉಡುಗೊರೆಗಳನ್ನು ನೀಡಲಾಗುತ್ತಿದೆ. ಅದೇ ರಿತಿ ಚಿಕ್ಕಮಗಳೂರಿನಲ್ಲಿ ಕಳೆದ ತಿಂಗಳು ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡಲಾಗಿತ್ತು. ಶಾಸಕ ಟಿ.ಡಿ ರಾಜೇಗೌಡ ಅವರು ನೀಡಿದ್ದ ಕುಕ್ಕರ್ ಮನೆಯಲ್ಲಿ ಸ್ಫೋಟಗೊಂಡಿದ್ದು, ಇದರಿಂದಾಗಿ ಕುಕ್ಕರ್ ಪಡೆದುಕೊಂಡಿರುವ ಜನರಲ್ಲಿ ಆತಂಕ ಉಂಟಾಗಿದೆ.
ಶಾನುವಳ್ಳಿ ಗ್ರಾಮದ ದೇವರಾಜ್ ಎಂಬುವರ ಮನೆಯಲ್ಲಿ ತರಕಾರಿ ಬೇಯಿಸಲು ಇಟ್ಟಿದ್ದಾಗ ಕುಕ್ಕರ್ ಸ್ಫೋಟಗೊಂಡಿದೆ. ತಾಯಿ, ಮಗು ಮನೆಯ ಹೊರಗಡೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಮತದಾರರನ್ನು ಸೆಳೆಯಲು ಹಂಚಲಾಗಿದ್ದ ಕುಕ್ಕರ್ ಸ್ಫೋಟಗೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳಪೆ ಕುಕ್ಕರ್ ನೀಡಿ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ನಾನು ತಲೆಮರೆಸಿಕೊಂಡಿಲ್ಲ; ಫೇಸ್ಬುಕ್ನಲ್ಲಿ ವಿಡಿಯೋ ಹರಿಬಿಟ್ಟ ಪುನೀತ್ ಕೆರೆಹಳ್ಳಿ
ಮೂಲ ಬೆಲೆ ಮರೆಮಾಚಿದ್ದ ಶಾಸಕ
ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಕ್ಷೇತ್ರದಾದ್ಯಂತ ಸುಮಾರು ಒಂದು ಲಕ್ಷ ಕುಕ್ಕರ್ ಹಂಚಿದ್ದರು. ಬಾಕ್ಸ್ ಮೇಲೆ ಕುಕ್ಕರಿನ ಮೂಲ ಬೆಲೆ ₹450 ಎಂದಿತ್ತು. ಕಾಂಗ್ರೆಸ್ ಕಾರ್ಯಕರ್ತರು ಅದರ ಮೇಲೆ ₹1,399 ಲೇಬಲ್ ಅಂಟಿಸಿದ್ದರು. ಇದನ್ನ ಕಂಡ ಮತದಾರರು ಶಾಸಕರೇ ನಮ್ಮನ್ನ ಯಾಮಾರಿಸಬೇಡಿ ಎಂದು ಲೇವಡಿ ಮಾಡಿದ್ದರು.