- ವಿಜಯ ಕರ್ನಾಟಕ ಆಯೋಜಿಸಿದ್ದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮದಲ್ಲಿ ಸಿಎಂ ಅಭಿಮತ
- ಕೃಷಿಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾದಾಗ ಮಾತ್ರ ರೈತನ ಬದುಕು ಉತ್ತಮ: ಸಿಎಂ
ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಎಲ್ಲ ರಾಜಕೀಯ ಪಕ್ಷಗಳು ರೈತನಿಗೆ ಸೇರಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಡೀ ಜಗತ್ತು ನಿಂತಿರುವುದು ಕೃಷಿ ಮತ್ತು ರೈತನ ಮೇಲೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ವಿಜಯ ಕರ್ನಾಟಕ ಆಯೋಜಿಸಿದ್ದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
“ಆಹಾರ ಉತ್ಪಾದಿಸುವ ರೈತ ಇಡೀ ಮನುಕುಲವನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡುತ್ತಾನೆ. ರೈತನ ಬದುಕು ಉತ್ತಮವಾಗಲು ಗ್ರಾಮೀಣ ಆರ್ಥಿಕ ಸ್ಥಿತಿ ಬದಲಾಗಬೇಕು. ಕೃಷಿಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು. ಇದರಲ್ಲಿ ಬ್ಯಾಂಕ್ ಗಳ ಪಾತ್ರ ಬಹಳ ದೊಡ್ಡದಿದೆ. ಈ ಬಗ್ಗೆ ಎಲ್ಲ ಬ್ಯಾಂಕರ್ ಗಳ ಜತೆ ಮಾತುಕತೆ ನಡೆಸಲಾಗಿದೆ” ಎಂದು ತಿಳಿಸಿದರು.
ರೈತನಿಗೆ ಶಕ್ತಿ ತುಂಬುವ ಕಾಲ
“ರೈತ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ. ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ ಕಾರ್ಯಕ್ರಮಗಳು ರೈತನನ್ನು ಶಕ್ತಿಶಾಲಿಯಾಗಿ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿ ಮೂಲಭೂತ ಬದಲಾವಣೆ ತರಲಾಗಿದೆ. ಕೃಷಿ ಬೆಳೆಗೆ ತಕ್ಕಂತೆ ಸಾಲದ ಪ್ರಮಾಣವನ್ನು ನೀಡಲು ಶೂನ್ಯ ಬಡ್ಡಿಯಲ್ಲಿ 5 ಲಕ್ಷದವರೆಗೆ ರೈತರಿಗೆ ಸಿಗುವ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದೆ” ಎಂದರು.
300 ಕೋಟಿ ವಿಶೇಷ ಆವರ್ತ ನಿಧಿ
“ರೈತರ ಆದಾಯ ಹೆಚ್ಚಳ ಮಾಡಲು 300 ಕೋಟಿ ರೂ.ಗಳ ವಿಶೇಷ ಆವರ್ತ ನಿಧಿ ಮೀಸಲಿಡಲಾಗಿದೆ. ಯಾವುದೇ ಬೆಳೆ ಬೆಲೆ ಕುಸಿದರೆ ತಕ್ಷಣ ಸ್ಪಂದಿಸಿ ಬೆಂಬಲ ಬೆಲೆ ಅಡಿ ಭತ್ತ, ರಾಗಿ, ತೊಗರಿ ಅಡಕೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. ರೈತರಿಗೆ ಯಶಸ್ವಿನಿ ಯೋಜನೆಯನ್ನು ಪುನಃ ಪ್ರಾರಂಭಿಸಲಾಗಿದೆ” ಎಂದರು.
ಕೃಷಿ ಸಚಿವ ಬಿ ಸಿ ಪಾಟೀಲ್, ವಿಜಯ ಕರ್ನಾಟಕ ಸಿಇಒ ರಂಜಿತ್ ಕಾಟೆ, ಕುಲಪತಿ ಸುರೇಶ್, ಸಂಪಾದಕ ಸುದರ್ಶನ್ ಇತರರು ಇದ್ದರು.