- 17 ಕಾಡಾನೆಗಳ ಹಿಂಡು ದಾಳಿ – ಮರಿ ಆನೆಗಳ ಚಿನ್ನಾಟ
- ಜಮ್ಮನಹಳ್ಳಿಯ ನಾಗರಾಜ್, ವಿಶ್ವನಾಥ್ ಅವರ ಕಾಫಿ ತೋಟಕ್ಕೆ ದಾಳಿ
ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ದಾಂದಲೆ ನಡೆಸಿದ್ದು, ಲಕ್ಷಾಂತರ ಮೌಲ್ಯದ ಕಾಫಿ-ಮೆಣಸಿನ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಜಮ್ಮನಹಳ್ಳಿಯ ನಾಗರಾಜ್ ಮತ್ತು ವಿಶ್ವನಾಥ್ ಎಂಬುವರ ಕಾಫಿ ತೋಟಕ್ಕೆ 17 ಕಾಡಾನೆಗಳ ಹಿಂಡು ಬುಧವಾರ ರಾತ್ರಿ ಲಗ್ಗೆ ಇಟ್ಟಿವೆ. ಮರಿ ಆನೆಗಳನ್ನು ಹೊಂದಿರುವ ಕಾಡಾನೆಗಳ ಗುಂಪು ಹೂವು ಬಿಟ್ಟಿರುವ ಕಾಫಿ ಗಿಡಗಳು, ಮೆಣಸಿನಬಳ್ಳಿ, ನೀರಿನ ಪೈಪ್ ಇತ್ಯಾದಿಗಳನ್ನು ನಾಶ ಮಾಡಿವೆ. ಕಾಫಿ ತೋಟಕ್ಕೆ ಸೋಲಾರ್ ಬೇಲಿ ಇಲ್ಲದ್ದರಿಂದ ಕಾಡಾನೆಗಳು ತೋಟಕ್ಕೆ ನುಗ್ಗಿವೆ ಎನ್ನಲಾಗಿದೆ.
ಕೆಲವು ವರ್ಷಗಳಿಂದ ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬಹುತೇಕರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಅನೇಕ ಕಡೆ ಹೊಲಗದ್ದೆಗಳು ಇಂದಿಗೂ ಪಾಳುಬಿದ್ದಿವೆ. ಒಂದು ವೇಳೆ ಧೈರ್ಯ ಮಾಡಿ ಬೆಳೆ ಬೆಳೆದರೂ ಫಸಲನ್ನು ರಕ್ಷಿಸಿಕೊಂಡು, ಕೈಗೆ ತೆಗೆದುಕೊಳ್ಳಲು ಹರಸಾಹಸಪಡಬೇಕಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕೋಳಿ ಸಾಂಬರ್ಗಾಗಿ ಜಗಳ; ಮಗನನ್ನೇ ಹತ್ಯೆಗೈದ ತಂದೆ
ಕಾಡಾನೆ ಹಾವಳಿಯಿಂದ ಉಂಟಾಗುವ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ತೀರ ಕಡಿಮೆ. ಜೊತೆಗೆ ತ್ವರಿತವಾಗಿಯೂ ಸಿಗುವುದಿಲ್ಲ. ಹಾಗಾಗಿ ಮಲೆನಾಡು ಭಾಗದ ರೈತರು ಮತ್ತು ಬೆಳೆಗಾರರು ಕಾಡಾನೆ ಸಮಸ್ಯೆಯಿಂದಾಗಿ ಹೈರಾಣಾಗಿದ್ದಾರೆ.