- ರಾಜಾಸೀಟು ಉದ್ಯಾನವನದಲ್ಲಿ ನಡೆದ ಚಿತ್ರಸಂತೆ
- ಜಿಲ್ಲೆಯ ಹಲವು ಕಲಾವಿದರಿಂದ ಚಿತ್ರಕಲೆ ಪ್ರದರ್ಶನ
ಮಡಿಕೇರಿಯ ರಾಜಾಸೀಟು ಉದ್ಯಾನದಲ್ಲಿ ಚಿತ್ರಸಂತೆಯಂಥ ಕಲಾಪ್ರಕಾರ ಆಯೋಜಿಸಲು ಸೂಕ್ತ ತಾಣವಾಗಿದ್ದು, ಮುಂದಿನ ದಿನಗಳಲ್ಲಿ ವಿನೂತನ ಚಿತ್ರಸಂತೆ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ ತಿಳಿಸಿದ್ದಾರೆ.
ಮಡಿಕೇರಿ ನಗರದ ರಾಜಾಸೀಟು ಉದ್ಯಾನವನದಲ್ಲಿ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಕೊಡಗು ಮತ್ತು ಮತದಾನ’ ಚಿತ್ರಕಲಾ ಸ್ಪರ್ಧೆ ಮತ್ತು ನಾನು ಮತ ಹಾಕುವೆ ಎಂಬ ಬೃಹತ್ ಕ್ಯಾನ್ವಸ್ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
“ಸ್ವೀಪ್ ಸಮಿತಿ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಮತದಾನದ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಮಾಡುವ ಹೊಣೆಗಾರಿಕೆ ಸಮಿತಿ ಮೇಲಿದೆ. ಈ ನಿಟ್ಟಿನಲ್ಲಿ ಮತದಾನದ ಮಹತ್ವ ಸಾರುವ ಚಿತ್ರಕಲಾ ಸ್ಪರ್ಧೆಯನ್ನೂ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಭಾನುವಾರ ಮಡಿಕೇರಿಯಲ್ಲಿ ಮತದಾನ ಮಹತ್ವ ಸಾರುವ ಬೈಕ್ ಜಾಥಾ, ಏಪ್ರಿಲ್ 30 ರಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್ ಟಿ ಅನಿಲ್ ಮಾತನಾಡಿ, “ಚಿತ್ರಕಲಾ ಸ್ಪರ್ಧೆಯಲ್ಲಿ 132 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. 14 ವರ್ಷದೊಳಗಿನ ಮಕ್ಕಳು ಕೂಡ ಮತದಾನದ ಮಹತ್ವ ಅರಿಯಲು ಚಿತ್ರಕಲಾ ಕಾರ್ಯಕ್ರಮ ಉಪಯುಕ್ತವಾಗಿದೆ. ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಕೋವಿಡ್ಗಿಂತ ಮುಂಚಿನ ವರ್ಷಗಳಲ್ಲಿ ಐದು ಸಲ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿಶ್ವಚಿತ್ರಕಲಾ ದಿನಾಚರಣೆಯನ್ನು ಈ ಬಾರಿ ಜಿಲ್ಲಾಡಳಿತ, ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ಸಹಯೋಗದೊಂದಿಗೆ ತಾಲೂಕು ಜಾನಪದ ಪರಿಷತ್ ಆಯೋಜಿಸಿದೆ” ಎಂದರು.
ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತದ ರಾಯಭಾರಿಗಳಾದ ಬಸವರಾಜ ಬಡಿಗೇರ್ ಮತದಾನದ ಮಹತ್ವ ಸಾರುವ ಹಾಡಿನ ಸಾಲುಗಳ ಮೂಲಕ ಗಮನ ಸೆಳೆದರು.
ರಾಯಭಾರಿ ವಿಶೇಷ ಚೇತನ ಎಸ್ ಕೆ ಈಶ್ವರಿ ಮಾತನಾಡಿ, “ಹಿರಿಯ ನಾಗರಿಕರು, ವಿಶೇಷ ಚೇತನರು ಕೂಡ ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು” ಎಂದು ಕೋರಿದರು.
ಮುಳುಗು ತಜ್ಞ ಮತ್ತು ಚುನಾವಣಾ ರಾಯಭಾರಿ ಕೆ ರವಿಮುತ್ತಪ್ಪ ಮಾತನಾಡಿ “ನಿರ್ಭೀತಿಯಿಂದ ಎಲ್ಲರೂ ಮತದಾನ ಮಾಡಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾದ ಸಂಗಣ್ಣ ಕರಡಿ
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ ಜಿ ಅನಂತಶಯನ ಮಾತನಾಡಿ, “ಅರ್ಹರು ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಮತದಾನದ ಮಹತ್ವ ಕುರಿತು ತಮ್ಮ ಊರುಗಳಲ್ಲಿಯೂ ಜಾಗೃತಿ ಮೂಡಿಸಬೇಕು. ಯಾರೂ ಸಹ ಮತದಾನದಿಂದ ದೂರ ಉಳಿಯಬಾರದು” ಎಂದು ಹೇಳಿದರು.
ಜಿಲ್ಲೆಯ ನಾನಾ ಕಡೆಗಳಲ್ಲಿ ಕಲಾವಿದರಾದ ಉ ರಾ ನಾಗೇಶ್, ಬಸವರಾಜ ಬಡಿಗೇರ್, ಸದಾನಂದ ಪುರೋಹಿತ್, ಸಾಧಿಕ್, ಸಂದೀಪ್, ಬಾವಾ ಮಾಲ್ದಾರೆ, ಮಂಜುನಾಥ್, ಮೃಣಾಲಿನಿ ಚಿಣ್ಣಪ್ಪ, ಪಯಸ್ವಿನಿ ಸತೀಶ್, ಸೂರತ್ ಪ್ರಸಾದ್ ಸೇರಿದಂತೆ ಅನೇಕ ಕಲಾವಿದರು ಮತದಾನದ ಮಹತ್ವ ಸಾರುವ ವರ್ಣಮಯ ಚಿತ್ರರಚಿಸಿ ಗಮನ ಸೆಳೆದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್ ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಜ್ಗೋಪಾಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ನಾಯಕ್, ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ ರಂಗಧಾಮಯ್ಯ ಸೇರಿದಂತೆ ಹಲವರು ಹಾಜರಿದ್ದರು.