ವಿಜಯಪುರ : 1943ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂ ಮಹಾಸಭಾಕ್ಕೆ ಪತ್ರ ಬರೆದು ಎಲ್ಲರಿಗೂ ಅನ್ವಯವಾಗುವ ಧರ್ಮಗ್ರಂಥ ಬರೆಯಲು ಸೂಚಿಸಿದ್ದರು. ಅವರಿಂದ ಇನ್ನೂ ಅದು ಸಾಧ್ಯವಾಗಿಲ್ಲ. ಅವರಿಂದ ಉತ್ತರ ಬಾರದಿದ್ದರೂ ಸಂವಿಧಾನವನ್ನು ರಚಿಸುವ ಮೂಲಕ ಎಲ್ಲ ಭಾರತೀಯರಿಗೆ ಘನತೆ ತಂದುಕೊಟ್ಟ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು ಎಂದು ಜೆಎನ್ಯುವಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದರು.
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರಲ್ಲಿ ಇಂದಿನಿಂದ ಆರಂಭಗೊಂಡ ಮೇ ಸಾಹಿತ್ಯ ಮೇಳದ ಎರಡನೇ ಅಧಿವೇಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಹುಸಂಸ್ಕೃತಿಯ ಇಡೀ ಭಾರತಕ್ಕೆ ಸಂವಿಧಾನದ ಮೂಲಕ ಸುಂದರವಾದ ವ್ಯಾಕರಣ ಬರೆದವರು ಅಂಬೇಡ್ಕರ್. ಎಲ್ಲರಿಗೂ ಸಮಾನತೆಯನ್ನು ನೀಡಿದ ಗ್ರಂಥವಿದ್ದರೆ ಅದು ಸಂವಿಧಾನ. ಆದರೆ ಇಂದು ಅವರು ಬರೆದಿರುವ ಸಂವಿಧಾನವನ್ನು ಬುಡಮೇಲುಗೊಳಿಸುವ ಪ್ರಯತ್ನ ನಡೆಯುತ್ತಿದೆ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಅನೇಕ ಆಶಯಗಳಿದ್ದವು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಆಶಯದಲ್ಲಿ ಗುರುತಿಸಿಕೊಂಡಿದ್ದರೂ ಕುವೆಂಪು ಶಿವರಾಮ ಕಾರಂತರಂತಹ ಒಳಸುಳಿ ಇರುವ ಆಶಯಗಳು ಕೂಡ ಸ್ಥಳೀಯ ಹಾಗೂ ಪ್ರಾದೇಶಿಕವಾಗಿ ಪಾತ್ರ ವಹಿಸಿದ್ದವು ಎಂಬುದನ್ನು ನಾವು ಮರೆಯಬಾರದು ಎಂದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಂದು ಜಾತಿ ಧರ್ಮದ ಜನರ ಪಾತ್ರವಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಕೆಲವರಿಗೆ ಈಗ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು 2014ರಲ್ಲಿ ಅಂದರೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಎಂದು ನಂಬಿದ್ದಾರೆ. ಇವರಿಗೆ ಜಗತ್ತು ಅಂದರೆ ಮೋದಿಯವರು ಹೋದ ದೇಶಗಳು ಮಾತ್ರ. ಇದೊಂದು ರೀತಿಯ ಬೌದ್ಧಿಕ ದಿವಾಳಿತನದ ಸಂಕೇತ. ಇದನ್ನು ರಿಪೇರಿ ಮಾಡಲು ನಾವು ನಿರಂತರವಾಗಿ ಪ್ರಯತ್ನ ಪಡಬೇಕಿದೆ ಎಂದು ಬಿಳಿಮಲೆ ಅಭಿಪ್ರಾಯಿಸಿದರು.
ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ಎ ನಾರಾಯಣ ದೇಶದ ಸಂವಿಧಾನವನ್ನು ಅಂಬೇಡ್ಕರ್ ಬರೆದ ಒಂದೇ ಕಾರಣಕ್ಕೆ ಇಂದು ಅದು ಈವರೆಗೆ ಉಳಿದುಕೊಂಡಿದೆ. ಒಂದು ವೇಳೆ ಬೇರೆ ಯಾರೇ ಬರೆದಿದ್ದರೂ ಅದು ಇಂದು ನಮ್ಮೆದುರಿಗೆ ಇರುತ್ತಿರಲಿಲ್ಲ. ಅಂಬೇಡ್ಕರ್ ಹಿಂದೆ ಒಂದು ಸಮುದಾಯವಿದೆ ಎಂಬ ಅರಿವು ಸಂವಿಧಾನದ ವಿರುದ್ಧವಾಗಿ ಕೆಲಸ ಮಾಡುವವರಿಗೆ ಇದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೇ ಸಾಹಿತ್ಯ ಮೇಳ | ಭಾರತದಲ್ಲಿ ಮನುವಾದದ ವಿರುದ್ಧ ಶರಣರ ಪರಂಪರೆಯಿದೆ: ಪ್ರಕಾಶ್ ಅಂಬೇಡ್ಕರ್
ನಿರ್ದಿಷ್ಟ ಧರ್ಮವೊಂದು ಅಪಾಯದಲ್ಲಿದೆ ಎಂದು ಕೆಲವರು ಬೊಬ್ಬಿಡುತ್ತಿದ್ದಾರೆ. ಆದರೆ ಅದು ಸುಳ್ಳು ಎಂದು ಎಲ್ಲರಿಗೂ ಗೊತ್ತಿದೆ. ಇದೇ ಸುಳ್ಳಿನ ಮೂಲಕ ಧರ್ಮಾಂಧತೆಯನ್ನು ಹೆಚ್ಚಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನ ಎನ್ನುವ ಧರ್ಮಗ್ರಂಥವಿದೆ. ಅದನ್ನು ಉಳಿಸಿದರೆ ಎಲ್ಲ ಧರ್ಮವೂ ಉಳಿಯುತ್ತದೆ ಎಂಬ ವಿಚಾರವನ್ನು ಬಹಿರಂಗವಾಗಿ ಅವರಿಗೆ ತಿಳಿ ಹೇಳಿ ಅರಿವು ಮೂಡಿಸಬೇಕಿದೆ. ಆ ಮೂಲಕ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕಿದೆ ಎಂದರು.