- ಬ್ರಿಜ್ ಭೂಷಣ್ ಪರವಾಗಿ ಕೇಂದ್ರ ಸರ್ಕಾರ ನಿಂತಿರುವುದು ನಿಜಕ್ಕೂ ಖಂಡನೀಯ
- ಕುಸ್ತಿಪಟುಗಳ ಹೋರಾಟ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಧಮನ ನಡೆಸಿದೆ
ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಹಲವು ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಧಾರವಾಡದಲ್ಲಿ ಎಐಡಿವೈಓ, ಎಐಡಿಎಸ್ಓ, ಎಐಎಂಎಸ್ಎಸ್, ಎಐಕೆಕೆಎಂಎಸ್, ಎಐಯುಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಎಂಎಸ್ಎಸ್ನ ರಾಜ್ಯ ಕಾರ್ಯದರ್ಶಿ ಎಸ್ ಶೋಭಾ ಮಾತನಾಡಿ, “ಲೈಂಗಿಕ ಕಿರುಕುಳ ನೀಡಿರುವ ಆರೋಪಿಯ ಬೆಂಬಲಕ್ಕೆ ಸರ್ಕಾರ ನಿಂತಿದೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರನ್ನು ಬಂಧಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಅತ್ಯಂತ ಖಂಡನೀಯ. ನ್ಯಾಯಕ್ಕಾಗಿ ನಡೆಯುವ ಹೋರಾಟಗಳನ್ನು ಈ ರೀತಿ ಅಪ್ರಜಾತಾಂತ್ರಿಕವಾಗಿ ಸದೆಬಡಿಯಲಾಗುತ್ತಿದೆ” ಎಂದು ಕಿಡಿಕಾರಿದರು.
“ಆಳುವ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ದೇಶದ ಕೀರ್ತಿ ಪತಾಕೆ ಎತ್ತಿಹಿಡಿದಿರುವ ಮಹಿಳಾ ಕುಸ್ತಿಪಟುಗಳ ಪರವಾಗಿ ನಿಲ್ಲಬೇಕಿತ್ತು. ಆದರೆ, 40ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಡಬ್ಲ್ಯುಎಫ್ಐನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ಸಿಂಗ್ ಪರವಾಗಿ ನಿಂತಿರುವುದು ನಿಜಕ್ಕೂ ಹೇಯ ಕೃತ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿವೈಓನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕುಮಾರ್ ಮಾತನಾಡಿ, “ಕೇಂದ್ರ ಸರ್ಕಾರ ತಾನು ಪ್ರಜಾಪ್ರಭುತ್ವದ ದೇವಾಲಯ ಎಂದು ಬಣ್ಣಿಸುತ್ತಿರುವ ಹೊಸ ಸಂಸತ್ತನ್ನು ಉದ್ಘಾಟಿಸಿದೆ. ಆದರೆ, ಅದರ ಪಕ್ಕದಲ್ಲಿಯೇ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಧಮನ ನಡೆಸಿದೆ. ಹೋರಾಟನಿರತ ನಾಯಕರನ್ನು ಬಂಧಿಸಿದ ಸರ್ಕಾರದ ಈ ನಡೆ ನ್ಯಾಯಯುತ ಪ್ರಜಾತಾಂತ್ರಿಕ ಚಳವಳಿಯನ್ನು ತಡೆಯಲು ನಿರ್ಮಿಸಿರುವ ಅಘೋಷಿತ ತುರ್ತುಪರಿಸ್ಥಿಯಾಗಿದೆ. ಆದ್ದರಿಂದ ಜನತೆ ಇಂತಹ ಕೃತ್ಯಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದೆ ಬರಬೇಕು” ಎಂದು ಕರೆ ನೀಡಿದರು.
ಕ್ರೀಡಾಪಟುಗಳ ಹೋರಾಟ ಬೆಂಬಲವಾಗಿ ದೆಹಲಿಯಲ್ಲಿ ಹೋರಾಟಗಾರರು ಮಹಿಳಾ ಮಹಾಪಂಚಾಯತ್ನ್ನು ಕರೆದಿದ್ದರು. ಆದರೆ, ಮೇ 28 ರಂದು ಮುಂಜಾನೆ ದೆಹಲಿ ಪೊಲೀಸರು ಆ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಐಎಂಎಸ್ಎಸ್ ಮಹಿಳಾ ಸಂಘಟನೆಯ ದೆಹಲಿ ರಾಜ್ಯ ಕಾರ್ಯದರ್ಶಿ ರಿತು ಕೌಶಿಕ್, ಎಸ್.ಯು.ಸಿ. ಐ.(ಸಿ) ಕಮ್ಯುನಿಸ್ಟ್ ಪಕ್ಷದ ಹರಿಯಾಣ ರಾಜ್ಯ ಸಮಿತಿಯ ಪ್ರಮುಖ ಸದಸ್ಯ ರಾಜೇಂದರ್ ಸಿಂಗ್ ಅವರನ್ನು ವಶಪಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆರ್ಎಸ್ಎಸ್-ಬಜರಂಗದಳದ ದಲಿತರು, ಶೂದ್ರರನ್ನು ಸೆಳೆಯಬೇಕಿದೆ: ಸತೀಶ್ ಜಾರಕಿಹೊಳಿ
ಎಐಕೆಎಂಎಸ್ ರೈತ ಸಂಘಟನೆಯ ಹರಿಯಾಣ ರಾಜ್ಯ ಕಾರ್ಯದರ್ಶಿ ಜೈಕರನ್ ಮಂಡೋತಿ ಅವರ ಮನೆಗೆ ಪೊಲೀಸರು ಫೇರಾವ್ ಹಾಕಿದ್ದಾರೆ. ಪೊಲೀಸರ ಈ ಎಲ್ಲಾ ದಮನಕಾರಿ ಕ್ರಮಗಳು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಎಐಡಿಎಸ್ಓನ ಜಿಲ್ಲಾ ಕಾರ್ಯದರ್ಶಿ ಶಶಿಕಲಾ, ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಭುವನ ಮಾತನಾಡಿದರು.
ಪ್ರತಿಭಟನೆಯಲ್ಲಿ ಎಐಡಿವೈಓನ ಅಖಿಲ ಭಾರತ ಅಧ್ಯಕ್ಷ ನಿರಂಜನ್ ನಸ್ಕರ್, ಉಪಾಧ್ಯಕ್ಷ ಜಿ ಶಶಿ ಕುಮಾರ್, ರಾಜ್ಯಾಧ್ಯಕ್ಷ ಶರಣಪ್ಪ ಉದ್ಘಾಳ್, ಎಐಎಂಎಸ್ಎಸ್ನ ರಾಜ್ಯ ಉಪಾಧ್ಯಕ್ಷ ಎಂ ಎನ್ ಮಂಜುಳಾ, ಎಐಕೆಕೆಎಂಎಸ್ನ ರಾಜ್ಯ ಉಪಾಧ್ಯಕ್ಷ ಲಕ್ಷಣ್ ಜಡಗನ್ನವರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಬಾಗೇವಾಡಿ ಹಾಗೂ ಇತರರು ಭಾಗವಹಿಸಿದ್ದರು.