- ಬಿಬಿಎಂಪಿ ಆಸ್ತಿ ಉಳಿಸಿಕೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯ – ಆರೋಪ
- ನ್ಯಾ. ಗೋವಿಂದರಾಜ್ ಏಕಸದಸ್ಯ ನ್ಯಾಯಪೀಠದಿಂದ ಅರ್ಜಿ ವಿಚಾರಣೆ
ವ್ಯಾಜ್ಯಗಳನ್ನು ಬಗೆಹರಿಸಲು ಹಾಗೂ ಕಾನೂನು ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಬಿಬಿಎಂಪಿಯ 8 ವಲಯಗಳಿಗೆ ಕಾನೂನು ಮುಖ್ಯಸ್ಥರ ನೇಮಕ ಮಾಡಿಕೊಳ್ಳಲಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಇವುಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಹೈಕೋರ್ಟ್ ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಬೆಂಗಳೂರಿನ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿಕೊಂಡು ಡಿ ಶಶಾಂಕ್ ಎಂಬಾತ ಮನೆ ಕಟ್ಟಿಕೊಂಡಿದ್ದಾರೆ. ಅಧಿಕಾರಿಗಳು ಆ ಜಾಗವನ್ನು ತೆರವುಗೊಳಿಸುವಲ್ಲಿ ಮತ್ತು ಪಾಲಿಕೆ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಹೈಕೋರ್ಟ್ನಲ್ಲಿ ಸಿವಿಲ್ ಕೇಸ್ ದಾಖಲಿದ್ದರು.
“ಒತ್ತುವರಿ ಮಾಡಿಕೊಂಡು ಮನೆ ಕಟ್ಟುವಾಗ ಪಾಲಿಕೆ ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿ, ಪಾಲಿಕೆ ಜಾವನ್ನು ಉಳಿಸಿಕೊಳ್ಳಲು ಯತ್ನಿಸಬೇಕಿತ್ತು. ಆದರೆ, ಯಾವೊಬ್ಬ ಅಧಿಕಾರಿಗಳು ಇದನ್ನು ಮಾಡಲಿಲ್ಲ.ಪಾಲಿಕೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಯ ಜೊತೆ ಶಾಮೀಲಾಗಿ ಕಟ್ಟಡ ಕಟ್ಟಲು ಅನುಕೂಲ ಮಾಡಿಕೊಟ್ಟಿದೆ” ಎಂದು ವೆಂಕಟೇಶ್ ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ; ಪೊಲೀಸರಿಂದ ರಕ್ಷಣೆ
ಅವರ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ. ಈ ವೇಳೆ ಹಾಜರಿದ್ದ ಬಿಬಿಎಂಪಿ ಕಾನೂನು ಕೋಶದ ಮುಖ್ಯಸ್ಥ ಚಂದ್ರಶೇಖರ ಪಾಟೀಲ, “ಬಿಬಿಎಂಪಿಯ 8 ವಲಯಗಳಲ್ಲಿದ್ದ ಲೋಪಗಳನ್ನು ಸರಿಪಡಿಸಲು ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಪಾಲಿಕೆ ಪರವಾಗಿ ವಕಲತ್ತು ವಹಿಸಲು ವಕೀಲರನ್ನು ನೇಮಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ” ಎಂದರು.
“ಬಿಬಿಎಂಪಿಯ ಅಧಿಕಾರಿಗಳು, ಕಾನೂನು ಸಲಹೆಗಾರರು ಮತ್ತು ಬಿಬಿಎಂಪಿ ವಕೀಲರ ನಡುವೆ ಸುಲಭವಾಗಿ ಸಂವಹನ ನಡೆಸುವ ಉದ್ದೇಶದಿಂದ ಸಿಸಿಎಂಎಸ್ (ಅಡಕಗೊಂಡ ವಿಷಯಗಳ ನಿರ್ವಹಣಾ ವ್ಯವಸ್ಥೆ) ವೇದಿಕೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ” ಎಂದು ತಿಳಿಸಿದರು.
ಇವರ ವಾದವನ್ನು ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಏಪ್ರಿಲ್ 11ಕ್ಕೆ ಮುಂದೂಡಿದೆ.