“ಪ್ರತಿಪಕ್ಷದ ನಾಯಕನಾಗುವ ಹಂಬಲ ನನಗಿಲ್ಲ. ಒಂದು ವೇಳೆ ಪಕ್ಷ ನನಗೆ ಆ ಜವಾಬ್ದಾರಿ ನೀಡಿದರೆ ಅದರ ಮಜಾನೇ ಬೇರೆ ಇರುತ್ತೆ. ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡುವೆ. ಆ ಶಕ್ತಿ ನನ್ನಲ್ಲಿ ಇದೆ” ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ನನ್ನನ್ನು ಏನೂ ಮಾಡದು. ಯಾಕಂದ್ರೆ ನನ್ನ ಮೇಲೆ ಯಾವುದೇ ಆರೋಪವಿಲ್ಲ. ನನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಕಾಂಗ್ರೆಸ್ನವರಿಗೆ ದಾರಿಯೇ ಇಲ್ಲ” ಎಂದರು.
“ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಅಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುತ್ತದೆ. ಅವರ ಗ್ಯಾರಂಟಿಯೊಂದಿಗೆ ಅವರ ವಾರಂಟಿಯೂ ಮುಗಿಯಲಿದೆ” ಎಂದರು.
“ಯು ಟಿ ಖಾದರ್ ನೂತನ ಸಭಾಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ, ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರಲ್ಲ. ಕೆಲವು ಶಾಸಕರು ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಕನ್ನಡಪರ ಹೋರಾಟಗಾರರು ಎಲ್ಲಿಗೆ ಹೋಗಿದ್ದರು? ಬಹುಶಃ ಅವರೆಲ್ಲ ಸಿಎಂ ಸಿದ್ದರಾಮಯ್ಯನವರ ಮನೆಯಲ್ಲಿ ಮಲಗಿರಬೇಕು” ಎಂದು ವ್ಯಂಗ್ಯವಾಡಿದರು.