ಕಾಂಗ್ರೆಸ್ ಶಾಸಕ ರಾಜು ಕಾಗೆ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಗೆ ಹಾಕಿದ್ದ ಗ್ರಾಮ ಪಂಚಾಯತಿ ಸದಸ್ಯನನ್ನು ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸರು ಬಂಧಿಸಿದ್ದಾರೆ.
ಶಿರಗುಪ್ಪಿ ಗ್ರಾಮ ಪಂಚಾಯತಿ ಸದಸ್ಯ ರಾಮನಗೌಡ ಪಾಟೀಲ್ ಬಂಧಿತ ಆರೋಪಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಕಾಂಗ್ರೆಸ್ ಶಾಸಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ರಾಮನಗೌಡ ಪಾಟೀಲ್, ತನ್ನ ಕುಟುಂಬಸ್ಥರೊಂದಿಗೆ ಶಾಸಕನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಆಹಕಿದ್ದರು ಎಂದು ತಿಳಿದುಬಂದಿದೆ.
ಸೋಮವಾರ, ಶಾಸಕ ರಾಜು ಕಾಗೆ ಅವರಿಗೆ ಕರೆ ಮಾಡಿದ್ದ ರಾಮನಗೌಡ ಪಾಟೀಲ್, “ನನ್ನ ಹೆಂಡತಿ, ಮಕ್ಕಳ ಸಮೇತ ನಿಮ್ಮ ಮನೆ ಬಳಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ” ಎಂದು ಬೆದರಿಕೆ ಹಾಕಿದ್ದರು. ಮಾತ್ರವಲ್ಲದೆ, ಶಿರಗುಪ್ಪಿ ಗ್ರಾಮದಲ್ಲಿ ಮೈಕ್ ಅಳವಡಿಸಿ, ತಾನು ಮಾತನಾಡುವುದು ಇಡೀ ಊರಿಗೆ ಕೇಳುವಂತೆ ಮಾಡಿದ್ದರು ಎಂದು ತಿಳಿದುಬಂದಿದೆ.
ತನ್ನ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಜು ಕಾಗೆ, “ರಾಮನಗೌಡ ಪಾಟೀಲ್ ಮಾಡಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಬದಲಾಗಿ, ಆತನೇ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ನಾನು ಆತನಿಗೆ ಕಿರುಕುಳ ನೀಡಿದ್ದರೆ, ಅದಕ್ಕೆ ಸಂಬಂಧಿಸಿದ ಸಾಕ್ಷಿ ಆತನ ಬಳಿ ಇದ್ದರೆ, ನ್ಯಾಯಾಲಯದಲ್ಲಿ ದೂರು ದಾಖಲಿಸಲಿ. ಆತನ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ” ಎಂದು ಹೇಳಿದ್ದಾರೆ.