ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್ಪಿಕೆಎಲ್) ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇತಿಹಾಸವಿರುವ ಮರಗಳ ನಿರ್ನಾಮ ಮಾಡಿದ್ದಲ್ಲದೆ, ಮರಗಳ ಬದಲಾಗಿ ಸಸಿ ನೆಡುವ ಯೋಜನೆ ಸಹ ಹೂಡಿಲ್ಲ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಿತ ಎನ್ಪಿಕೆಎಲ್ ಬಡಾವಣೆ ಬಳಿ ಶೇ. 75ರಷ್ಟಕ್ಕೂ ಹೆಚ್ಚು ಮರಗಳಿದ್ದವು. ಬಿಡಿಎ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಕಡಿದ ಮರಗಳ ಬದಲಾಗಿ ಸಸಿ ನೆಡುವ ಯೋಜನೆಯ ಮರೆತಿದೆ. ರಸ್ತೆಗಳ ಬದಿ ಕಿಂಚಿತ್ತು ಜಾಗ ಕೊಡದೇ, ಸಂಪೂರ್ಣವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದು ವಾಹನಗಳ ಸಂಚಾರಕ್ಕೆ ಮತ್ತು ಪಾದಾಚಾರಿಗಳು ನಡೆದಾಡುವಾಗ ನೆರಳಿಲ್ಲದೆ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅಧಿಕ ಮರ ಗಿಡಗಳನ್ನು ಬಡಾವಣೆ ನಿರ್ಮಾಣಕ್ಕಾಗಿ ನಾಶಮಾಡಲಾಗಿದೆ. ಯುಟಿಲಿಟಿ ಚಾನೆಲ್ನಿಂದಾಗಿ 30, 40, 50 ಅಡಿ ರಸ್ತೆಗಳಲ್ಲಿ ಒಂದು ಕಡೆ ಮಾತ್ರ ಗಿಡಗಳನ್ನು ನೆಡಲು ಅವಕಾಶವಿದೆ. ಇನ್ನೊಂದು ಬದಿಯ ಬೀದಿ ದೀಪದ ಕಂಬಗಳು, ಫೀಡರ್ ಪಿಲ್ಲರ್ ಬಾಕ್ಸ್, ಟ್ರಾನ್ಸ್ಫಾರ್ಮರ್ ಕಂಬಗಳು ಹಾಗೂ ವೈಯಕ್ತಿಕ ಸೈಟ್ ಪ್ರವೇಶ ಬರುವುದರಿಂದ ಗಿಡಗಳನ್ನು ನೆಡಲು ಸಾಧ್ಯವಿಲ್ಲ. 60 ಅಡಿ ರಸ್ತೆಗಳಲ್ಲಿ ಎರಡೂ ಬದಿಯ ಯುಟಿಲಿಟಿ ಚಾನಲ್ ಬರುವುದರಿಂದ ಗಿಡಗಳನ್ನು ಬೆಳೆಸಲು ಸ್ಥಳವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬಡಾವಣೆಯ ಅಭಿವೃದ್ಧಿಗಾಗಿ ಮತ್ತಷ್ಟು ಮರಗಳಿಗೆ ಕೊಡಲಿ ಬೀಳುತ್ತದೆ. ಮರಗಿಡಗಳ ಸಂಖ್ಯೆಯು ಕಡಿಮೆಯಾಗುವುದರಿಂದ ಅಂತರ್ಜಲ ಮತ್ತು ವಾತಾವರಣವೂ ಶಾಖದಿಂದ ಕೂಡಿರುತ್ತದೆ. ಇದರಿಂದಾಗಿ ಜೀವಸಂಕುಲ ಬಿಸಿಲಿನ ಬೇಗೆಯಿಂದ ಬಳಲುವಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮತದಾನ ಅತ್ಯಮೂಲ್ಯ; ತಪ್ಪದೆ ಮತದಾನ ಮಾಡಲು ಬಿಬಿಎಂಪಿ ವಿಶೇಷ ಆಯುಕ್ತ ಮನವಿ