ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಚೆನ್ನಾಗಿರೋ ಕ್ರಿಕೆಟ್ ಪಿಚ್, ಚೆನ್ನಾಗಿ ಬ್ಯಾಟಿಂಗ್ ಮಾಡಬಹುದೆಂದು ಭಾವಿಸಿ ಹೊರಗಿನ ಅಭ್ಯರ್ಥಿಗಳು ಎಂಟ್ರಿ ಕೊಟ್ಟಿದ್ದಾರೆ. ಕ್ಷೇತ್ರದ ಜನರು ಹೊರಗಿನವರಿಗೆ ಜಬರ್ದಸ್ತ್ ಬೌಲಿಂಗ್ ಮಾಡಿ, ಬೋಲ್ಡ್ ಔಟ್ ಮಾಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ, ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಖಾಶೆಂಪುರ್ ಮನವಿ ಮಾಡಿದರು.
ಬೀದರ್ ದಕ್ಷಿಣ ಕ್ಷೇತ್ರದ ನಿಜಾಂಪುರ, ಹಜ್ಜರಗಿ, ಕಮಲಾಪೂರ, ಕೋಳಾರ ಕೆ ಸೇರಿದಂತೆ ಹಲವೆಡೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, “ಏನೋ ಆಸೆಯಿಂದ ಹೊರಗಿನವ್ರು ನಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ. ಅವ್ರು ಯಾರೂ ಕೂಡ ಸದಾಕಾಲವೂ ಕ್ಷೇತ್ರದಲ್ಲಿ ಉಳಿದುಕೊಂಡು ಕೆಲಸ ಮಾಡುವವರಲ್ಲ. ಅಂತವರಿಗೆ ತಾವು ಅವಕಾಶ ನೀಡಬಾರದು” ಎಂದರು.
“ನಾನು ಇದೇ ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. ಸದಾಕಾಲವೂ ನಿಮ್ಮ ಕೈಗೆ ಸಿಗುವವನಾಗಿದ್ದೇನೆ. ಯಾವ ಸಮಯದಲ್ಲಿ ಬಂದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಒಳಗೆ ಹೊರಗೆ ವಿಧಾನಸಭಾ, ವಿಧಾನಸೌಧದ ಹೊರಗೆ ಒಳಗೆ ಮಹತ್ವದ ವಿಷಯಗಳ ಬಗ್ಗೆ ಧ್ವನಿ ಎತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ರೈತರ ಹಿತಾಸಕ್ತಿಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ: ದರ್ಶನ್ ಪುಟ್ಟಣ್ಣಯ್ಯ
“ಚುನಾವಣೆ ಮುಂದಿರುವಾಗ ಬಂದು ಬಣ್ಣಬಣ್ಣದ ಮಾತನಾಡಿ ಚುನಾವಣೆ ಮುಗಿದ ಬಳಿಕ ಮರಳಿ ನೋಡದಂತ ಜನರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕು. ಈ ಬಾರಿ ಎಲ್ಲರೂ ಜೆಡಿಎಸ್ ಪಕ್ಷವನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಬೇಕು” ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಚುನಾವಣಾ ಪ್ರಚಾರದ ವೇಳೆ ಮನವಿ ಮಾಡಿದರು.