ದೇಶಕ್ಕೆ ಪದಕ ತಂದುಕೊಟ್ಟ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಡಬ್ಲ್ಯೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ ಆತನನ್ನು ಶಿಕ್ಷಿಸಬೇಕೆಂದು ಪ್ರಜಾ ಪ್ರಭುತ್ವ ಸಮಿತಿ ಒತ್ತಾಯಿಸಿದೆ.
ಬ್ರಿಜ್ ಭೂಷಣ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಜಾ ಪ್ರಭುತ್ವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಗಗನ್ ಫುಲೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಭಾಲ್ಕಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಪ್ರಜಾ ಪ್ರಭುತ್ವ ಸಮಿತಿಯ ಗಗನ್ ಫುಲೆ ಮಾತನಾಡಿ, “ಭಾರತಕ್ಕೆ ಒಲಂಪಿಕ್ಸ್, ಏಷಿಯನ್ ಗೇಮ್ಸ್, ಕಾಮವೆಲ್ತ್ ಗೇಮ್ಸ್ ಸೇರಿದಂತೆ ಹಲವಾರು ರಾಷ್ಟ್ರಿಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ತಂದುಕೊಟ್ಟ ಕ್ರೀಡಾಪಟುಗಳಲ್ಲಿ ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ವಿಷಯ. ಆದರೆ, ಅದೇ ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಕಳೆದ ನಾಲ್ಕೈದು ತಿಂಗಳಿಂದ ದೆಹಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ದುರಂತವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ರೈತ ಸಂಘ ಪ್ರತಿಭಟನೆ
“ಡಬ್ಲೂಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎನ್ನುವ ವ್ಯಕ್ತಿ ತಮ್ಮ ಮೇಲೆ ಲೈಂಗಿಕ ಶೋಷಣೆ, ದಬ್ಬಾಳಿಕೆ, ಬಲವಂತ ಸ್ಪರ್ಶ ಹೀಗೆಯೇ ಹಲವಾರು ರೀತಿಯ ಕಿರುಕುಳ ನೀಡಿದ್ದಾನೆಂದು ಕುಸ್ತಿಪಟುಗಳು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ದೌರ್ಜನ್ಯದ ವಿರುದ್ಧ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎನ್ನುವವನ ಮೇಲೆ ಹಲವಾರು ಪ್ರಕರಣಗಳು ದಾಖಲಾದರೂ ಕೂಡ ಅವನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ಆತನ ಬೆನ್ನಿಗೆ ನಿಂತು ರಕ್ಷಿಸುತ್ತಿರುವುದು ಮೆಲ್ನೋಟಕ್ಕೆ ಕಾಣುತ್ತಿದೆ. ಕುಸ್ತಿಪಟುಗಳು ಪದಕ ಗೆದ್ದು ಬಂದಾಗ ಶ್ಲಾಘಿಸಿದ ಸರ್ಕಾರ ಅದೇ ಕುಸ್ತಿಪಟುಗಳಿಗೆ ಅನ್ಯಾಯವಾದಾಗ ಅವರ ಜೊತೆ ನಿಲ್ಲದೆ ಇರುವುದು ದೇಶಕ್ಕೆ ಮಾಡಿದ ಅವಮಾನವಾಗಿದೆ. ಬ್ರಿಜ್ ಭೂಷಣ ಶರಣ್ ಸಿಂಗ್ ಎನ್ನುವವನನ್ನು ಕೂಡಲೇ ಬಂಧಿಸಿ ತೀವ್ರ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಜಾಪ್ರಭುತ್ವ ಸಮಿತಿಯ ಶಿವಕುಮಾರ್ ಜಾಧವ್, ಜೈಪ್ರಕಾಶ್ ಸಿಂಧೆ, ಶ್ಯಾಮಶುಂದರ್ ಗುಲಾಬೆ, ಸತೀಶ್ ಫುಲೆ, ಚಿತ್ರಶೇನ್ ಫುಲೆ ಇದ್ದರು.