ಬೀದರ್ನಲ್ಲಿ ಸುರಿದ ಧಾರಕಾರ ಮಳೆಗೆ ಔರಾದ್ ತಾಲ್ಲೂಕಿನ ಹೆಡಗಾಪೂರ ಗ್ರಾಮದ ಒಂದೇ ಕುಟುಂಬದ ಮೂರು ಮಂದಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು. ಅವರ ಮೃತದೇಹಗಳು ಸೋಮವಾರ ಪತ್ತೆಯಾಗಿದೆ.
ಒಂದೇ ಕುಟುಂಬದ ತಾಯಿ ಸುನಂದಾ ಸಂಗಪ್ಪ (42) , ಮಗ ಸಮೀತ (18), ಮಗಳು ಐಶ್ವರ್ಯ (14) ಮೃತ ದುರ್ದೈವಿಗಳು. ಭಾನುವಾರ ಹೊಲದಲ್ಲಿ ಕೃಷಿ ಕೆಲಸಕ್ಕೆ ಹೋಗಿ ಸಂಜೆ ವಾಪಸ್ ಮನೆಗೆ ಬರುವಾಗ ಹಳ್ಳ ತುಂಬಿ ಹರಿಯುತ್ತಿತ್ತು. ಕಡಿಮೆ ನೀರು ಇತ್ತು. ಆದರೆ, ಹಳ್ಳ ದಾಟುವಾಗ ಒಮ್ಮೆಲೇ ಅಪ್ಪಳಿಸಿದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ಜೊತೆಯಲ್ಲೇ ಇದ್ದ ಸುನಂದಾ ಪತಿ ಸಂಗಪ್ಪ ಈಜಿಕೊಂಡು ದಡ ಸೇರಿದ್ದು, ಬದುಕುಳಿದಿದ್ದಾರೆ. ಈಜು ಬಾರದ ಮೂವರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಧಾವಿಸಿದ ಠಾಣಾ ಕುಶನೂರ ಪೋಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದರು. ಸೋಮವಾರ ಬೆಳಗ್ಗೆ ಹಳ್ಳದಲ್ಲಿದ್ದ ಮುಳ್ಳಿನ ಪೊದೆಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.
ಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ?: ರಾಯಚೂರು ಎಪಿಎಂಸಿಯಲ್ಲಿ ತುಂಬಿದ ನೀರು; ಚುನಾವಣಾ ವಿಷಯವಾದ ರೈತರ ಸಂಕಷ್ಟ