- ದಯಾನಂದ ದಾನಣ್ಣವರ್ ಅಲಿಯಾಸ್ ದಯಾನಂದ ಬಂಧಿತ ಆರೋಪಿ
- ಸಂತ್ರಸ್ತ ಬಾಲಕಿಗೆ ₹3 ಲಕ್ಷ ಪರಿಹಾರ ಘೋಷಣೆ ಮಾಡಿದ ನ್ಯಾಯಾಲಯ
ಖಾಸಗಿ ಬಸ್ ಚಾಲಕ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಆತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಅವರು 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಮರಕಡ ನಿವಾಸಿ ದಯಾನಂದ ದಾನಣ್ಣವರ್ ಅಲಿಯಾಸ್ ದಯಾನಂದ (30) ಬಂಧಿತ ಆರೋಪಿ.
“ಆರೋಪಿ ಇನ್ಸ್ಟಾಗ್ರಾಮ್ ಮೂಲಕ 13 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದು, ಚಾಟ್ ಮಾಡಲು ಪ್ರಾರಂಭಿಸಿದ್ದನು” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟರಮಣ ಸ್ವಾಮಿ ಪ್ರಕರಣದ ವಿವರಗಳನ್ನು ನೀಡಿದರು.
“2022ರ ಜನವರಿ 27ರಂದು ಖಾಸಗಿ ಬಸ್ ಚಾಲಕ ಬಾಲಕಿಗೆ ಫೋನ್ ಮಾಡಿ, ತನ್ನೊಂದಿಗೆ ಬರಲು ಆಹ್ವಾನಿಸಿದನು. ಹುಡುಗಿ ನಿರಾಕರಿಸಿದಳು. ಮರುದಿನ ತನ್ನೊಂದಿಗೆ ಬರುವಂತೆ ಆಕೆಯನ್ನು ಮನವೊಲಿಸಿ ಲಾಡ್ಜ್ಗೆ ಕರೆದೊಯ್ದ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಯಾರಿಗೂ ಏನನ್ನೂ ಬಹಿರಂಗಪಡಿಸದಂತೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಾನೆ” ಎಂದು ಆರೋಪಿಸಿದರು.
“ಬಾಲಕಿಯ ಪೋಷಕರು ಘಟನೆಯ ಬಗ್ಗೆ ತಿಳಿದು, ಮರುದಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಿದ ಬಳಿಕ ಮೇ 22ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಇನ್ಸ್ಪೆಕ್ಟರ್ ಎಸ್ಎಚ್ ಭಜಂತ್ರಿ ಮತ್ತು ರೇವತಿ ಸೇರಿ ಪ್ರಕರಣದ ತನಿಖೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
ಆರೋಪಿಗೆ ಪೊಕ್ಸೊ ಕಾಯ್ದೆಯಡಿ 20 ವರ್ಷ ಜೈಲು ಮತ್ತು ₹50,000 ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ ನಾಲ್ಕು ತಿಂಗಳ ಆರ್ಐಗೆ ಒಳಗಾಗುತ್ತಾರೆ ಎಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯವು ಸಂತ್ರಸ್ತೆಗೆ ₹3 ಲಕ್ಷ ಪರಿಹಾರ ಘೋಷಿಸಿದೆ. ಆಕೆಯ ಶಿಕ್ಷಣದ ವೆಚ್ಚಕ್ಕಾಗಿ ತಕ್ಷಣ ₹1 ಲಕ್ಷ ನೀಡುವಂತೆ ಮತ್ತು ಉಳಿದ ₹2 ಲಕ್ಷ ಆಕೆ ವಯಸ್ಕಳಾಗುವವರೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
“ವೈದ್ಯಕೀಯ ಪುರಾವೆಗಳ ಜೊತೆಗೆ, ಬಾಲಕಿ ಮತ್ತು ಲಾಡ್ಜ್ ಮಾಲೀಕ ಸೇರಿದಂತೆ 9 ಸಾಕ್ಷಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ” ಎಂದು ವೆಂಕಟರಮಣ ಸ್ವಾಮಿ ಹೇಳಿದರು.