- ಅಮಾನಿ ಬೈರಸಾಗರ ಕೆರೆದಡದಲ್ಲಿ ತೇಲುತ್ತಿದ್ದ ಮೀನುಗಳ ಕಳೇಬರ
- ಕಳಪೆ ಆಹಾರ ತಿಂದು ಮೀನುಗಳು ಸತ್ತಿರಬಹುದೆಂಬ ಶಂಕೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಮಾನಿ ಬೈರಸಾಗರ ಕೆರೆಯಲ್ಲಿ ಮೀನುಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿವೆ. ವಿಷಪೂರಿತ ಅಹಾರದಿಂದಲೂ ಮೀನುಗಳು ಮೃತಪಟ್ಟಿರಬಹುದು ಎಂದು ಸಾರ್ವಜನಿಕರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹವಾಮಾನ ವೈಪರೀತ್ಯ ಹಾಗೂ ಇತರೆ ಕಾರಣದಿಂದ ಮೀನುಗಳು ಮೃತಪಟ್ಟಿರಬಹುದು. ಕೆರೆಯ ನೀರನ್ನು ಪರಿಕ್ಷೇಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ಬಾಗೇಪಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ದಾದಾಪೀರ್ ತಿಳಿಸಿದ್ದಾರೆ.
ಸ್ಥಳೀಯ ದಸಂಸ ಮುಖಂಡ ಗುಡಿಬಂಡೆ ಗಂಗಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಕಳೆದ ಮೂರು ದಿನಗಳಿಂದ ಪಟ್ಟಣದ ಹೊರವಲಯದಲ್ಲಿರುವ ಅಮಾನಿ ಬೈರಸಾಗರ ಕೆರೆ ದಡದ ಸುತ್ತಮುತ್ತ ಮೀನುಗಳ ಕಳೇಬರ ತೇಲುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಬೆಳಿಗ್ಗೆ ಸಂಜೆ ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದೆ” ಎಂದು ತಿಳಿಸಿದರು.
ಕಳಪೆ ಆಹಾರವನ್ನು ಕೆರೆಗೆ ಸುರಿದಿದ್ದರಿಂದ ಅದನ್ನು ಮೀನುಗಳು ತಿಂದು ಸತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೆರೆಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ವಾಸ್ತವ ಸಂಗತಿ ಏನೆಂಬುದು ಖಚಿತವಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ₹36 ಲಕ್ಷ ಮೌಲ್ಯದ ಮದ್ಯ ವಶ
“ನೀರಿನಲ್ಲಿ ಅಮ್ಲಜನಕದ ಏರುಪೇರು ಉಂಟಾಗಿ ಮೀನುಗಳು ಮೃತಪಟ್ಟಿರಬಹುದು. ಕೆಲವರು ಕೆರೆಯಲ್ಲಿ ರಾಸಾಯನಿಕ ಬೆರೆಸಿರುವ ಕಾರಣ ಮೀನುಗಳು ಸಾಯುತ್ತಿವೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಮೇಲ್ನೋಟಕ್ಕೆ ಹಾಗೇ ಮಾಡಿಲ್ಲ ಎಂದು ಕಂಡುಬಂದಿದೆ. ಆದರೂ ಕೆರೆಯ ನೀರನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪರೀಕ್ಷೆ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ” ಎಂದು ಬಾಗೇಪಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ದಾದಾಪೀರ್ ತಿಳಿಸಿದ್ದಾರೆ.