- ಮೀನು ಹಿಡಿದು ತಂದು ಸಾಕುವ ಬಗ್ಗೆ ಮಾತನಾಡಿಕೊಂಡಿದ್ದ ಸಹೋದರರು
- ನಾಲ್ಕು ತಿಂಗಳ ಹಿಂದೆ ರೋಹಿತ್ನ ತಮ್ಮ ಶಾಲಾ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ
ಆಕಸ್ಮಿಕವಾಗಿ ಕೆರೆಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಕುಂಟಿನಮಡು ಗ್ರಾಮದಲ್ಲಿ ನಡೆದಿದೆ.
ಯಶವಂತ (10), ರೋಹಿತ್ (6) ಮೃತಪಟ್ಟ ಬಾಲಕರು. ಕುಂಟಿನಮಡು ಗ್ರಾಮ ಸಮೀಪದ ಕೆರೆ ಬಳಿ ಹೋಗಿದ್ದ ಬಾಲಕರು ಆಯತಪ್ಪಿ ಬಿದ್ದು ಭಾನುವಾರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಶಶಿಧರ ಮತ್ತು ಪುಷ್ಪಾ ದಂಪತಿಯ ಪುತ್ರ ಯಶವಂತ, ಶಶಿಧರ ಅವರ ಸಹೋದರ ಹರೀಶ್ ಮತ್ತು ಸೌಮ್ಯ ದಂಪತಿಯ ಮಗ ರೋಹಿತ್.
ಶಶಿಧರ್ ಎಂದಿನಂತೆ ತೋಟಕ್ಕೆ ತೆರಳಿದ್ದರು. ಈ ವೇಳೆ ಅವರನ್ನೇ ಹಿಂಬಾಲಿಸಿಕೊಂಡು ಐದನೇ ತರಗತಿ ಓದುತ್ತಿದ್ದ ಯಶವಂತ್ ಹಾಗೂ ಈ ವರ್ಷ ಒಂದನೇ ತರಗತಿಗೆ ದಾಖಲಾತಿ ಪಡೆಯಬೇಕಿದ್ದ ರೋಹಿತ್ ಸೈಕಲ್ನಲ್ಲಿ ಸಾಗಿದ್ದಾರೆ.
ಊರಿನ ಹೊರಭಾಗದ ಕೆರೆಯಲ್ಲಿ ಮಕ್ಕಳು ಆಕಸ್ಮಿಕವಾಗಿ ಮುಳುಗಿದ್ದಾರೆ. ಕೆರೆಯಲ್ಲಿ ಮುಳುಗುತ್ತಿರುವ ಮಕ್ಕಳನ್ನು ನೋಡಿದ ಸ್ಥಳೀಯರೊಬ್ಬರು ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿ ನೀರಿಗೆ ಧುಮುಕಿ ರಕ್ಷಿಸುವ ಪ್ರಯತ್ನ ಮಾಡಿದರು.
ಇಬ್ಬರು ಮಕ್ಕಳನ್ನು ಕೆರೆಯಿಂದ ಹೊರ ತೆಗೆಯುವಾಗ ರೋಹಿತ್ನ ಉಸಿರು ಅದಾಗಲೇ ನಿಂತಿತ್ತು. ಯಶವಂತ್ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಆತನೂ ಮೃತಪಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಚಾರ್ಮಾಡಿ ಘಾಟಿಯಲ್ಲಿ ಟ್ರೆಕ್ಕಿಂಗ್ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ
ಭಾನುವಾರ ಬೆಳಗ್ಗೆಯೇ ಮನೆಯಲ್ಲಿ ಯಶವಂತ್ ಮತ್ತು ರೋಹಿತ್ ಮೀನು ಸಾಕುವ ಬಗ್ಗೆ ಮಾತನಾಡಿದ್ದರು. ಮೀನನ್ನು ಹಿಡಿದು ತಂದು ಮನೆಯಲ್ಲಿ ಸಾಕುವ ಬಗ್ಗೆ ಮಾತನಾಡಿಕೊಂಡು ತಂದೆಯನ್ನು ಹಿಂಬಾಲಿಸಿಕೊಂಡು ಸೈಕಲ್ನಲ್ಲಿ ಕೆರೆಗೆ ತೆರಳಿ ಮೀನು ಹಿಡಿದು ತರುವ ಪ್ರಯತ್ನ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ನಾಲ್ಕು ತಿಂಗಳ ಹಿಂದೆ ರೋಹಿತ್ ತಮ್ಮ ಒಂದೂವರೆ ವರ್ಷದ ಭುವನ್ ಹೊಸದುರ್ಗ ತಾಲೂಕಿನ ದೊಡೇನಪಾಳ್ಯದಲ್ಲಿ ಶಾಲಾ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ, ಆದಾಗಿ ಕೆಲವೇ ದಿನಗಳ ಅಂತರದಲ್ಲಿ ಮತ್ತಿಬ್ಬರು ಮಕ್ಕಳು ಮೃತಪಟ್ಟಿದ್ದರಿಂದ ಕುಟುಂಬದವರ ಆಘಾತಕ್ಕೆ ಒಳಗಾಗಿದ್ದಾರೆ. ಮಕ್ಕಳ ಮೃತದೇಹ ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.