ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋತ ಹಿನ್ನೆಲೆ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ಬುಧವಾರ ರಾಜೀನಾಮೆ ನೀಡಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇಂದು ಎಚ್ ಡಿ ದೇವೆಗೌಡರು ಪಕ್ಷದ ಹಿರಿಯರು ಮತ್ತು ಮುಖಂಡರನ್ನು ಕರೆದಿದ್ದಾರೆ. ಫಲಿತಾಂಶ ಬಂದ ಮರುದಿನ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ” ಎಂದರು.
ಕಾಂಗ್ರೆಸ್ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗುತ್ತೇವೆ. ಯು ಟಿ ಖಾದರ್ ಡಿಸಿಎಂ ಮಾಡಬಹುದಿತ್ತಲ್ಲ. ಈಗ ಅವರು ಎದ್ದೇಳುವ ಹಾಗೂ ಇಲ್ಲ, ಮಾತನಾಡುವ ಹಾಗೂ ಇಲ್ಲ” ಎಂದರು.
“60 ಲಕ್ಷ ಮತಗಳನ್ನು ರಾಜ್ಯದಲ್ಲಿ ಪಡೆದಿದ್ದೇವೆ. ಬಿಜೆಪಿ ವಿರೋಧಿ ಅಲೆ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕೊನೆಯ ನಾಲ್ಕು ದಿನದ ತಂತ್ರಗಾರಿಕೆಯಲ್ಲಿ ವಿಫಲವಾಗಿದ್ದೇವೆ. ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ ಅಂತ ಕಾರ್ಯಕರ್ತರಿಗೆ ಹೇಳುತ್ತೇನೆ” ಎಂದರು.