- ಅಜರುದ್ದೀನ್ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ 23 ಪ್ರಕರಣ ದಾಖಲು
- 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಅಝೀಝ್ (45) ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಲವು ನ್ಯಾಯಾಲಯಗಳಿಂದ ಹೊರಡಿಸಲಾಗಿದ್ದ 23 ವಾರೆಂಟ್ಗಳನ್ನು ಎದುರಿಸುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಕೃಷ್ಣಾಪುರ ನಿವಾಸಿ ಅಜರುದ್ದೀನ್ ಯಾನೆ ಅಜರ್ ಯಾನೆ ನಾಥು (29) ಎಂಬಾತನನ್ನು ಬಂಧಿಸಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಅಜರುದ್ದೀನ್ ವಿರುದ್ಧ ಮಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ 16, ದಕ್ಷಿಣ ಕನ್ನಡ ಜಿಲ್ಲೆಯ ಇತರ ತಾಲೂಕುಗಳ ಪೊಲೀಸ್ ಠಾಣೆಗಳಲ್ಲಿ 3 ಮತ್ತು ಉಡುಪಿಯಲ್ಲಿ 4 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಸುರತ್ಕಲ್ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ತಲಾ 2, ಉಳ್ಳಾಲ 4, ಬರ್ಕೆ, ಕೊಣಾಜೆ ತಲಾ 3, ಮೂಲ್ಕಿ, ಮಂಗಳೂರು ಗ್ರಾಮಾಂತರ, ಬೆಳ್ತಂಗಡಿ, ವಿಟ್ಲ, ಬಂಟ್ವಾಳ ನಗರ, ಕಾಪು, ಮಣಿಪಾಲ, ಮಲ್ಪೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಇನ್ನೋರ್ವ ಆರೋಪಿ ಅಬ್ದುಲ್ ಅಝೀಝ್ (45) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ತುಂಬೆ ಗ್ರಾಮದ ನಿವಾಸಿಯಾಗಿರುವ ಈತ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನಗರ, ದಕ್ಷಿಣ ಕನ್ನಡ, ಹಾಸನ ಮತ್ತು ನೆರೆಯ ಕೇರಳದ ಹಲವು ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ.
ಈತನ ವಿರುದ್ಧ ಕೊಣಾಜೆಯಲ್ಲಿ 4, ಉಳ್ಳಾಲದಲ್ಲಿ 3, ಬಂಟ್ವಾಳ ಮತ್ತು ಹಾಸನದ ಅರೇಹಳ್ಳಿಯಲ್ಲಿ ತಲಾ 1 ಹಾಗೂ ಕೇರಳದ ಕುಟ್ಯಾಡಿ ಪೊಲೀಸ್ ಠಾಣೆಯಲ್ಲಿ 1 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.