‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆ ಪ್ರತಿರೂಪ ಮದರ್ ತೆರೇಸಾ ಸೇವೆ ಸಲ್ಲಿಸಿದ್ದರು. ಅವರ 26ನೇ ಸಂಸ್ಮರಣಾ ದಿನಾಚರಣೆ ಅಂಗವಾಗಿ ಸಪ್ಟೆಂಬರ್ 21ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರೊನಾಲ್ಡೊ ಕೆಸ್ಟಲಿನೋ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮದರ್ ತೆರೇಸಾ ನೆನಪಿನಲ್ಲಿ ‘ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು’ ಎಂಬ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ದಿನೇಶ್ ಅಮಿತ್ ಮಟ್ಟು ಉದ್ಘಾಟಿಸಲಿದ್ದಾರೆ” ಎಂದು ಹೇಳಿದ್ದಾರೆ.
“ವಿಚಾರ ಸಂಕಿರಣದಲ್ಲಿ ಸಾಹಿತಿ, ಬರಹಗಾರ ಡಾ.ಕೆ.ಅಶ್ರಫ್ ವಿಚಾರ ಮಂಡನೆ ಮಾಡಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಶ್ರಫ್ ಕೆ ಅವರು ಪ್ರತಿಕ್ರಿಯೆ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.
“ಪ್ರೀತಿ ಹಾಗೂ ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದ ಜಗತ್ತಿನ ಮಹಾತಾಯಿ ಮದರ್ ತೆರೇಸಾ ಅವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಯುವ ಪೀಳಿಗೆಯ ಮಧ್ಯೆ ಕೊಂಡೊಯ್ಯುವ ಉದ್ದೇಶವಿದೆ. ಅದಕ್ಕಾಗಿ, 2017ರಿಂದ ‘ಸಂತ ಮದರ್ ತೆರೇಸಾ ವಿಚಾರ ವೇದಿಕೆ’ಯು ವಿಚಾರ ಸಂಕಿರಣ, ಸಂವಾದ, ಸೌಹಾರ್ದ ಹಬ್ಬಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ವಧರ್ಮದ ಜನತೆಯ ಪ್ರೀತಿ ವಿಶ್ವಾಸಗಳನ್ನು ಹೊರಹೊಮ್ಮಿದೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸುನಿಲ್ ಕುಮಾರ್ ಬಜಲ್, ಡೋಲ್ಫಿ ಡಿ’ಸೋಜಾ, ಅಲ್ವಿನ್ ಡಿಸೋಜ, ಅಬ್ದುಲ್ ಮುನೀರ್, ಸ್ಟಾನಿ ಡಿ ಕುನ್ನಾ ಇದ್ದರು.