ಕೋಮುವಾದದ ಪ್ರಯೋಗ ಶಾಲೆ ಎಂಬುದು ಮಂಗಳೂರಿಗೆ ಅಂಟಿಕೊಂಡಿರುವ ಕಳಂಕ. ಇಂತಹ ಮಾನವೀಯ ಘಟನೆಗಳು ಜಿಲ್ಲೆಯ ಉದ್ದಗಲಕ್ಕೂ ಪ್ರತೀ ಕ್ಷಣ ನಡೆಯುತ್ತಿರುತ್ತವೆ. ಮಾರಿಕೊಂಡ ಮಾಧ್ಯಮದಲ್ಲಿ ಇವು ಸುದ್ದಿಯಾಗುವುದು ವಿರಳ
‘ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮತ್ತು ಸಂವಿಧಾನಕ್ಕೆ ಧಕ್ಕೆ ತರುವ ಸಂಘಟನೆಗಳ ನಿಷೇಧʼ ಎಂಬ ಉಲ್ಲೇಖವಿರುವ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದ್ದೇ ತಡ ಬುದ್ಧಿವಂತರ ಜಿಲ್ಲೆಯ ʼಉಗ್ರʼ ಮತ್ತು ʼಮೃದುʼ ಹಿಂದುತ್ವವಾದಿಗಳು ಹಾಗೂ ʼಕೋಮುವಾದದ ರಾಜಕೀಯʼ ಮಾಡುವವರು ತಮ್ಮ ಬುಡಕ್ಕೆ ಬೆಂಕಿ ಬಿದ್ದಂತೆ ಮೊನ್ನೆ ಕಿರುಚಾಡಿದ್ದರು. ಆದರೆ, ಈ ಬೆಂಕಿಯನ್ನು ನಂದಿಸುವ ಸಿಹಿ ಸುದ್ದಿಯೊಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಯುವ ನಾಯಕ ಇನಾಯತ್ ಅಲಿ ತನ್ನ ಕ್ಷೇತ್ರದ ಮತದಾರ, ಭಜರಂಗದಳದ ಕಾರ್ಯಕರ್ತ, ಮಂಗಳೂರಿನ ನೀರ್ ಮಾರ್ಗ ಬಳಿಯ ನಿವಾಸಿ ಗಣೇಶ್ ಪೂಜಾರಿ ಎಂಬ ಯುವಕನಿಗೆ ಮರುಜೀವ ನೀಡಿರುವ ಸುದ್ದಿಯಿದು.
ಪೈಂಟಿಂಗ್ ಕೆಲಸ ಮಾಡುತ್ತಿದ್ದ 25ರ ಹರೆಯದ ಗಣೇಶ್ ಪೂಜಾರಿ ಮೇ 29, 2022ರಂದು ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ಕೋಲಕ್ಕೆ ಹೋಗಿ ತನ್ನ ಸೇಹಿತನ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹಿಂತಿರುಗುವಾಗ ರಸ್ತೆ ಅಪಘಾತವಾಗಿತ್ತು. ದ್ವಿಚಕ್ರ ವಾಹನದಲ್ಲಿ ಜೊತೆಗಿದ್ದ ಇನ್ನೊಬ್ಬ ಯವಕ ಸ್ಥಳದಲ್ಲೇ ಮರಣ ಹೊಂದಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಗಣೇಶ್ ಪೂಜಾರಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಮಾರು 45 ದಿನ ಕಾಲ ಕೋಮಾದಲ್ಲಿದ್ದು, ಜೀವನ್ಮರಣ ಹೋರಾಟದಲ್ಲಿದ್ದರು. ಆಸ್ಪತ್ರೆ ಬಿಲ್ ಬರೋಬ್ಬರಿ ಒಟ್ಟು 24 ಲಕ್ಷ ರೂಪಾಯಿ ಆಗಿತ್ತು. ಇಷ್ಟು ದೊಡ್ಡ ಮೊತ್ತದ ಬಿಲ್ ಕಟ್ಟಲಾಗದೆ ಗಾಯಾಳು ಕುಟುಂಬಸ್ಥರು ಕಂಗಾಲಾಗಿದ್ದರು. ತಮ್ಮ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿಯನ್ನು ಸಂಪರ್ಕಿಸಿ ಸಹಾಯಕ್ಕೆ ಅಂಗಲಾಚಿದರೂ ಯಾವುದೇ ಪ್ರಯೋಜವಾಗಲಿಲ್ಲ.
ಈ ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ ಇನಾಯತ್ ಅಲಿ ಗಣೇಶ್ ಪೂಜಾರಿ ಕುಟುಂಬಕ್ಕೆ ಸಾಂತ್ವನ ನೀಡಿದರು. 17 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ಲು ಪಾವತಿಸಿ ಮಾನವೀಯತೆ ಮೆರೆಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.
“ಆಸ್ಪತ್ರೆಯಲ್ಲಿದ್ದಾಗ ಕರೆಮಾಡಿ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ರಾತ್ರಿ ಹಗಲೆನ್ನದೆ ಅನೇಕ ಬಾರಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈವಾಗ ಪ್ರತಿ ತಿಂಗಳು ತಪಾಸಣೆ ವೆಚ್ಚ ಸುಮಾರು 6000 ರೂಪಾಯಿ ಖರ್ಚಾಗುತ್ತಿದೆ. ಅದನ್ನೂ ಇನಾಯತ್ ಅಲಿಯವರೇ ನಮಗೆ ನೀಡುತ್ತಿದ್ದಾರೆ” ಎನ್ನುತ್ತಾರೆ ಮನೆಯಲ್ಲೀಗ ಚೇತರಿಸಿಕೊಳ್ಳುತ್ತಿರುವ ಗಣೇಶ್ ಪೂಜಾರಿ.
“ಇನಾಯತ್ ಅಲಿಯವರು ದೇವರಂತೆ ಬಂದು ಮಗನನ್ನು ಉಳಿಸಿಕೊಟ್ಟಿದ್ದಾರೆ. ಮಗನಿಗೆ ಮರುಜೀವ ನೀಡಿದ್ದಾರೆ. ನನ್ನ ಮಗನ ಜೀವ ಇನಾಯತ್ ಅಲಿಯವರು ನೀಡಿರುವ ಭಿಕ್ಷೆʼ ಎಂದು ಗಣೇಶ್ ಪೂಜಾರಿಯವರ ತಾಯಿ ಗಿರಿಜಾ ಭಾವುಕರಾಗಿ ಹೇಳುತ್ತಾರೆ.
“ನಮ್ಮ ಮನೆ ಮಾರಿದರೂ ಇಷ್ಟೊಂದು ಮೊತ್ತ ಆಸ್ಪತ್ರೆಗೆ ಕಟ್ಟಲು ಆಗುತ್ತಿರಲಿಲ್ಲ. ನಾವು ಬಡವರು, ನಮ್ಮ ಕುಟುಂಬಕ್ಕೆ ಬೆಂಗಾವಲಾಗಿ ನಿಂತವರು ಇನಾಯತ್ ಅಲಿಯವರು. ಆ ಸಂದರ್ಭದಲ್ಲಿ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ರೈಡ್ ಆಗಿತ್ತು. ಆದರೂ ಇನಾಯತ್ ಅಲಿಯವರು ನಮ್ಮ ಕೈ ಬಿಡಲಿಲ್ಲ” ಎನ್ನುತ್ತಾರೆ ಗಣೇಶ್ ಪೂಜಾರಿಯ ತಂದೆ ಮುರುಗೇಶ್ ಪೂಜಾರಿ.
ಕೋಮುವಾದದ ಪ್ರಯೋಗ ಶಾಲೆ ಎಂಬುದು ಮಂಗಳೂರಿನಂತಹ ಮಂಗಳೂರಿಗೆ ಅಂಟಿಕೊಂಡಿರುವ ಕಪ್ಪು ಚುಕ್ಕೆ. ಇಂತಹ ಮಾನವೀಯ ಘಟನೆಗಳು ಜಿಲ್ಲೆಯ ಉದ್ದಗಲಕ್ಕೂ ಪ್ರತೀ ಕ್ಷಣ ನಡೆಯುತ್ತಿರುತ್ತವೆ. ಮಾರಿಕೊಂಡ ಮಾಧ್ಯಮದಲ್ಲಿ ಇವು ಸುದ್ದಿಯಾಗುವುದು ವಿರಳ. ಈ ನೆಲದ ಬಹುತ್ವ, ಭಾವೈಕ್ಯತೆಯ ಸಂಸ್ಕೃತಿಯ ಬೇರು ಇನ್ನೂ ಆಳವಾಗಿ, ಗಟ್ಟಿಯಾಗಿವೆ ಎಂಬುದಕ್ಕಿದು ಸಾಕ್ಷಿ. ಮಂಗಳೂರು ಉತ್ತರದಲ್ಲಿ ಮತದಾರರು ಇನಾಯತ್ ಅಲಿಯವರನ್ನು ಗೆಲ್ಲಿಸುತ್ತಾರೋ ಎಂಬುದು ಮೇ 13ರಂದು ತಿಳಿಯುತ್ತದೆ. ಆದರೆ, ಈಗಾಗಲೇ ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಮನಸ್ಸನ್ನು ಇನಾಯತ್ ಅಲಿ ಗೆದ್ದಿದ್ದಾರೆ.