ಭಕ್ತಿ ಸಾಹಿತ್ಯವು ಬದುಕಿನ ವಿಕಾಸಕ್ಕೆ ನೇರ ಸಂಸ್ಕಾರ ನೀಡಿ, ಶಾರೀರಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಗಳನ್ನು ಸಂರಕ್ಷಿಸುವ ಸಾಧನಾ ಮಾರ್ಗವಾಗಿದೆ ಎಂದು ಔರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಸಂಜೀವಕುಮಾರ ತಾಂದಳೆ ನುಡಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ಬೀದರ ವತಿಯಿಂದ ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಸ ಸಾಹಿತ್ಯ ಸಂಶೋಧಕರು ‘ಪ್ರೊ. ವಸಂತ ಕುಷ್ಟಗಿ ಅವರ ಬದುಕು ಮತ್ತು ಬರಹ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾಸರು ಜ್ಞಾನ ಸುಧೆಯನ್ನು ಹರಿಸಿ ವಿಶ್ವವನ್ನು ನೆಮ್ಮದಿಯಾಗಿರಿಸಲು ಸತ್ವದ ಸಾರವನ್ನು ಸುಲಭವಾಗಿ ಕನ್ನಡದಲ್ಲಿ ನೀಡಿದ್ದಾರೆ ಎಂದರು.
ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಅನೀಲಕುಮಾರ ಜಾಧವ, ಪ್ರೊ. ವಸಂತ ಕುಷ್ಟಗಿ ಅವರ ಬದುಕು ಮತ್ತು ಬರಹ ಕುರಿತು ಉಪನ್ಯಾಸ ನೀಡಿ, ಪ್ರೊ. ಕುಷ್ಟಗಿ ತಮ್ಮ ಇಡೀ ಜೀವನನ್ನು ಸಾಹಿತ್ಯ ಸೇವೆ ವಿಶೇಷವಾಗಿ ದಾಸ ಸಾಹಿತ್ಯ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಮುಡಿಪಾಗಿದ್ದರು. ಅವರ ಕನ್ನಡ ಸಾಹಿತ್ಯದ ಸಂಶೋಧನಾ ಮತ್ತು ಸಂಪಾದಿತ ಕೃತಿಗಳು ಅತ್ಯಮೂಲ್ಯಗಳಾಗಿವೆ ಎಂದರು.
ಕಾಲೇಜಿನ ಕಾರ್ಯದರ್ಶಿ ಗೋವಿಂದರಾವ ತಾಂದಳೆ ಮಾತನಾಡಿ, ಜೀವನಕ್ಕೆ ಸಂಸ್ಕಾರ ನೀಡುವ ಸಾಹಿತ್ಯ ಪ್ರಚಾರ ನಿರಂತರವಾಗಿ ಜರುಗಲಿ ಎಂದು ಆಶಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯುತ್ ದರ ಏರಿಕೆ ವಿರೋಧಿಸಿ ಕೈಗಳಿಗೆ ಬೇಡಿ ಹಾಕಿಕೊಂಡು ಪ್ರತಿಭಟನೆ
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ ಮಾತನಾಡಿ, ಕರ್ನಾಟಕ ಭಕ್ತಿ ಪಂಥದ ಸಾಹಿತ್ಯವು ಬದುಕಿಗೆ ಇಂಬನ್ನು ನೀಡುತ್ತದೆ. ಇಂತಹ ವಿಶ್ವಮಾನ್ಯ ಸಾಹಿತ್ಯವ್ನು ನಿರಂತರ ಪ್ರಚಾರ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಹೇಶ ಮೈಲೂರಕರ್, ಭಾಗ್ಯಶ್ರೀ ಝಡ್, ಇವಾಂಗಲಿ, ಸೌಮ್ಯ ಕೆ, ಜೆಸ್ಸಿಕಾ ರಾಣಿ , ಸಾಕ್ಷಿ ವಿ, ಕೀರ್ತನೆಗಳು ಮತ್ತು ಕುಷ್ಟಗಿ ರಸಿಸಿರುವ ಕವಿತೆ ಹಾಡಿದರು. ಮಹೇಬೂಬ್ ಉಸ್ತಾದ್ ನಿರೂಪಿಸಿದರು, ಕಾವೇರಿ ಸ್ವಾಗತಿಸಿದರು, ದುರ್ಗಾಂಜಲಿ ವಂದಿಸಿದರು.