- ಮುಂಜಾಗೃತ ಕ್ರಮ ಕೈಗೊಳ್ಳದೆ ಕೆಲಸದ ಆದೇಶ ನೀಡಿದ ಅಧಿಕಾರಿ ಬಂಧನಕ್ಕೆ ಆಗ್ರಹ
- ಮೃತರ ಕುಟುಂಬಕ್ಕೆ ಪರಿಹಾರ, ಎಲ್ಲ ಸೌಲಭ್ಯ ವಿಸ್ತರಿಸುವ ಭರವಸೆ ನೀಡಿದ ಶಿವಣ್ಣ
ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಅಸ್ವಸ್ಥರಾಗಿದ್ದ ಇಬ್ಬರು ಪೌರಕಾರ್ಮಿಕರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವನಕೋಟೆ ಗ್ರಾಮದ ದುಂಡಪ್ಪ (45) ಮತ್ತು ನಾಗಪ್ಪ (42) ಮೃತ ದುರ್ದೈವಿಗಳು. ಬಸವನಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಧರ್ ಪಾಟೀಲ್ ಅವರು ದುಂಡಪ್ಪ ಮತ್ತು ನಾಗಪ್ಪ ಅವರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಮಲಗುಂಡಿ ಸ್ವಚ್ಛಗೊಳಿಸುವಂತೆ ಹೇಳಿದರು. ಇದರ ಪರಿಣಾಮವಾಗಿ ಮಲಗುಂಡಿಯಿಂದ ಹೊರಸೂಸುವ ವಿಷಕಾರಿ ಅನಿಲದಿಂದ ಉಸಿರುಗಟ್ಟಿದ ಕಾರ್ಮಿಕರು ಅಸ್ವಸ್ಥರಾಗಿದ್ದರು.
ಈ ಕುರಿತು ದೂರು ನೀಡಿದ ಕೂಡಲೇ ಅವರನ್ನು ಅರಸೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅವರಿಗೆ ಅರಸೀಕೆರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಫಾಯಿ ಕರ್ಮಚಾರಿಗಳ ಮೃತಪಟ್ಟಿದ್ದಾರೆ.
ಬಡಕುಟುಂಬಗಳ ಆಧಾರ ಸ್ತಂಬಗಳ ಬಲಿ
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಇಬ್ಬರು ಸಫಾಯಿ ಕರ್ಮಚಾರಿಗಳ ಸಾವಿಗೆ ಕಾರಣಗಳ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ವರದಿ ಕೇಳಿದ್ದೇನೆ” ಎಂದು ತಿಳಿಸಿದರು.
“ನಾವು ತನಿಖೆಗೆ ಒತ್ತಾಯಿಸಿದ್ದೇವೆ. ತನಿಖೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು. ಎಂ.ಎಸ್. ಕಾಯ್ದೆ 2013ರ ಪ್ರಕಾರ ಮಲಗುಂಡಿಗಳಿಗೆ ಇಳಿಯುವಂತೆ ಆದೇಶ ನೀಡುವಂತಿಲ್ಲ. ಅದರಲ್ಲೂ ಮುಂಜಾಗೃತ ಕ್ರಮ ಕೈಗೊಳ್ಳದೆ ಕೆಲಸದ ಆದೇಶ ನೀಡಿದ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದರು.
“ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ 4 ಅಡಿ ಮಲಗುಂಡಿಗೆ ಇಳಿದಿದ್ದರು. ಉಸಿರಾಟಕ್ಕೆ ತೊಂದರೆಯಾಗಿರುವುದೇ ಅವರ ಸಾವಿಗೆ ಕಾರಣವಾಗಿದೆ. ಗುರುವಾರ ದುಂಡಪ್ಪ ಮತ್ತು ನಾಗಪ್ಪ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರಿಗೆ ಪರಿಹಾರ ಮತ್ತು ಎಲ್ಲ ಸೌಲಭ್ಯ ವಿಸ್ತರಿಸುವಂತೆ ನೋಡಿಕೊಳ್ಳುತ್ತೇನೆ” ಎಂದು ಶಿವಣ್ಣ ಭರವಸೆ ನೀಡಿದರು.
“ದುಂಡಪ್ಪ ಮತ್ತು ನಾಗಪ್ಪ ಅವರು ಮಲಗುಂಡಿ ಸ್ವಚ್ಛಗೊಳಿಸುವಾಗ ಅಸ್ವಸ್ಥರಾದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಜಗಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.