- ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ
- ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೊಶ
ರಾಜ್ಯದಲ್ಲಿ ಇದುವರೆಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಸರ್ಕಾರ ತನ್ನ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಪಕ್ಷದ ಮುಖಂಡರು ದಾವಣಗೆರೆ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದ್ದಾರೆ. ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಮುಖಂಡ ನಿಜಾಮುದ್ದೀನ್, “ರಾಜ್ಯದ ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ಮೀಸಲಾತಿ ಇತ್ತು. ಇದನ್ನು ಕಿತ್ತು ಇನ್ನೊಂದು ಸಮುದಾಯಕ್ಕೆ ಹಂಚುವ ಮೂಲಕ ದ್ವೇಷದ ಬೀಜ ಭಿತ್ತುವ ಹುನ್ನಾರವನ್ನು ಸರ್ಕಾರ ಮಾಡಿದೆ” ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? : ಬೀದರ್ | ಮುಸ್ಲಿಂ ಮೀಸಲಾತಿ ಮುಂದುವರೆಸಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
“ರಾಜ್ಯ ಸರ್ಕಾರದ ಈ ನಡೆಯು ಅಸಂವಿಧಾನಿಕವಾಗಿದ್ದು, ಮುಸ್ಲಿಮರ ವಿರುದ್ಧ ನಡೆಸುವ ಷಡ್ಯಂತ್ರವಾಗಿದೆ. ಬಿಜೆಪಿಯು ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲಿದ್ದು, ಜಾತ್ಯಾತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದ ಎಲ್ಲ ಸಮುದಾಯದ ಹಿತ ಕಾಯುಬೇಕಿದ್ದ ಸರ್ಕಾರವು ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಘೋರ ದುರಂತವಾಗಿದೆ. ಕೂಡಲೇ ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಈ ನಿರ್ಧಾರ ಕೈಬಿಡಬೇಕು. ಮುಸ್ಲಿಮರ 2ಬಿ ಮೀಸಲಾತಿ ಯತಾವತ್ತಾಗಿ ಮುಂದುವರೆಸಬೇಕು” ಎಂದು ಮನವಿ ಮಾಡಿದರು.
“ರಾಜ್ಯದ ರಾಜ್ಯಪಾಲರು ಕೂಡಲೇ ಈ ವಿಷಯಕ್ಕೆ ಮಧ್ಯಸ್ಥಿತಿಕೆ ವಹಿಸಿ, ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಯತಾವತ್ತಾಗಿ ಮುಂದುವರಿಸುವಂತೆ ಸರ್ಕಾರಕ್ಕೆ ಅದೇಶಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಜಮಿಲ್, ಉಪಾಧ್ಯಕ್ಷ ಬಿ ಬಿ ಸಪುರ, ಕಾರ್ಯದರ್ಶಿ ಪಾರುಕ್, ಮೊಹಮ್ಮದ್ ಹಯಾತ್ ಹಾಗೂ ಪಕ್ಷದ ಮಹಿಳಾ ನಾಯಕಿಯರು ಹಾಜರಿದ್ದರು.