- ಜನರ ಕಂಡರೆ ಅಟ್ಟಾಡಿಸಿಕೊಂಡು ಬರುತ್ತಿರುವ ಸಲಗ; ಹಲವರು ಪಾರು
- ಚುನಾವಣೆ ಮುಗಿದ ಬಳಿಕ ಅನುಮತಿ ಪಡೆದು ಸ್ಥಳಾಂತರ – ಆರ್ಎಫ್ಒ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ವ್ಯಾಪ್ತಿಯ ಬೊಬ್ಬನಹಳ್ಳಿ, ಜಾತಹಳ್ಳಿ ಹಾಗೂ ವಳಲಹಳ್ಳಿ ಭಾಗದಲ್ಲಿ ಕೆಲವು ದಿನಗಳಿಂದ ಉಪಟಳ ನೀಡುತ್ತಿರುವ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂಬ ಆಗ್ರಹ ಜೋರಾಗಿದೆ.
ಕೊಡಗು ಜಿಲ್ಲೆಯ ಶನಿವಾರಸಂತೆ ಭಾಗದಿಂದ ಸಕಲೇಶಪುರದತ್ತ ಬಂದಿರುವ ಒಂಟಿ ಸಲಗವು ಹೊತ್ತೂರು ಭಾಗದಲ್ಲಿ ಸಾಕಷ್ಟು ಬೆಳೆ ಹಾನಿ ಮಾಡುತ್ತಿದೆ. ಅಲ್ಲದೆ ಜನರನ್ನು ಕಂಡರೆ ಸಾಕು ಓಡಿಸಿಕೊಂಡು ಬರುತ್ತಿದೆ.
ಕಾಡಾನೆಯೂ ಈ ರೀತಿ ದಾಳಿ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಕಾಫಿ, ಏಲಕ್ಕಿ, ಹಸಿರು ಮೆಣಸು, ಭತ್ತ, ಬೀನ್ಸ್ ಸೇರಿದಂತೆ ತರಕಾರಿ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಮನಬಂದಂತೆ ಈ ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದಾರೆ. ಕೆಲವು ದಿನಗಳ ಹಿಂದೆ ಹಾಡ್ಲಹಳ್ಳಿ ಗ್ರಾಮದ ಬಳಿ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಕೂಲಿ ಕಾರ್ಮಿಕ ಮಹಿಳೆಯರನ್ನು ಕಾಡಾನೆ ಓಡಿಸಿಕೊಂಡು ಬಂದಿದೆ. ಈ ವೇಳೆ ಕೂಗಾಡಿದ್ದರಿಂದ ಆನೆ ತೋಟಕ್ಕೆ ನುಗ್ಗಿದೆ. ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯರು ಪಾರಾಗಿದ್ದರು.
ಮೊತ್ತೊಂದು ದಿನ ಬೊಬ್ಬನಹಳ್ಳಿಯ ಸುರೇಶ್ ಅವರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದರು. ಜೊತೆಗೆ ಕಲ್ಲುತೋಟ ಗ್ರಾಮದಲ್ಲಿ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಕೂದಲೆಳೆಯಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದ.
ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿಯನ್ನು ಅಟ್ಟಾಡಿಸಿದ್ದ ಸಲಗ
ಕಾಡಾನೆ ದಾಂಧಲೆ ಹೆಚ್ಚಾದ ಕಾರಣ ಕಾಡಾನೆಯಿಂದ ಎಚ್ಚರವಾಗಿ ಇರುವಂತೆ ಜನರಿಗೆ ಮಾಹಿತಿ ನೀಡಲು ಗ್ರಾಮಕ್ಕೆ ಆಗಮಿಸಿದ್ದ ‘ಎಲಿಫೆಂಟ್ ಟಾಸ್ಕ್ ಫೋರ್ಸ್’ ಸಿಬ್ಬಂದಿಯನ್ನೂ ಈ ಒಂಟಿ ಸಲಗ ಅಟ್ಟಾಡಿಸಿಕೊಂಡು ಹೋಗಿತ್ತು. ಈ ದೃಶ್ಯವನ್ನು ಸಿಬ್ಬಂದಿ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಹೀಗೆ ಕಂಡಕಂಡವರ ಮೇಲೆ ಸಲಗ ದಾಳಿ ನಡೆಸುತ್ತಲೇ ಇದೆ.
ಒಂಟಿ ಆನೆಯನ್ನು ಗುಂಪಿನೊಂದಿಗೆ ಸೇರಿಸಲು ಟಾಸ್ಕ್ ಫೋರ್ಸ್ ಸಿಬ್ಬಂದಿ ನಿತ್ಯ ಹರಸಾಹಸ ಪಡುತ್ತಿದ್ದಾರೆ. ಪಟಾಕಿ ಸಿಡಿಸಿದರೆ, ಇಲ್ಲವೇ ಸಿಡಿ ಗುಂಡು ಹಾರಿಸಿದರೆ ಕಾಡಾನೆಯೂ ಸಿಬ್ಬಂದಿ ಮೇಲೆಯೇ ತಿರುಗಿ ಬೀಳುತ್ತಿದೆ.
ಬೊಬ್ಬನಹಳ್ಳಿಗೆ ಅಧಿಕಾರಿಗಳ ಭೇಟಿ
ಉಪಟಳ ನೀಡುತ್ತಿರುವ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂಬ ಸ್ಥಳೀಯರ ಒತ್ತಡ ಹೆಚ್ಚಾದ್ದರಿಂದ ಯಸಳೂರು ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಬೊಬ್ಬನಹಳ್ಳೀಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆದರೂ ಕಾಡಾನೆ ಹಾವಳಿ ಮುಂದುವರಿದಿದೆ.
ಅಪಾರ ಪ್ರಮಾಣದ ಬೆಳೆ ಹಾನಿ
ಬೇಸಿಗೆ ಸಂದರ್ಭದಲ್ಲಿ ತರಕಾರಿ, ಹಸಿರು ಮೆಣಸಿನ ಕಾಯಿ ಬೆಳೆಯುತ್ತಾರೆ ಅಲ್ಲದೇ ಈ ಸಂದರ್ಭದಲ್ಲಿ ಕಾಫಿ ಗಿಡಗಳು ಹೂವು ಬಿಡುವ ಕಾಲ. ಈ ಸಂದರ್ಭದಲ್ಲಿ ಕಾಡಾನೆ ಗದ್ದೆ, ತೋಟಗಳಿಗೆ ನುಗ್ಗುತ್ತಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗುತ್ತಿದೆ. ಕೇವಲ ಬೆಳೆ ಅಷ್ಟೇ ನಾಶ ಮಾಡದೆ, ನೀರನ ಪಂಪ್ಸೆಟ್, ಪೈಪುಗಳನ್ನು ತುಳಿದು ಪುಡಿಪುಡಿ ಮಾಡುತ್ತಿದೆ.
ಸೋಮವಾರ ರಾತ್ರಿ ಜಾತಹಳ್ಳಿಯ ನಾಗೇಶ್ ಎಂಬುವರ ಹಸಿರು ಮೆಣಸಿನಕಾಯಿ ಗಿಡಗಳು ಹಾಗೂ ನೀರಾವರಿ ಪೈಪುಗಳನ್ನು ತುಳಿದು ಬಾರಿ ಮೊತ್ತದ ನಷ್ಟ ಉಂಟುಪಾಡಿದೆ. ಜೊತೆಗೆ ಜಾತಹಳ್ಳಿಯ ಸುಬ್ರಹ್ಮಣ್ಯ ಅವರ ಕೃಷಿ ಹೊಂಡದಲ್ಲಿ ಕಾಡಾನೆ ನೀರಿಗೆ ಇಳಿದು ಈಜಾಡಿದ್ದು, ಹೊಂಡದ ದಡದಲ್ಲಿದ್ದ ಪಂಪ್ಸೆಟ್ನ್ನು ಕೆರೆಗೆ ತಳ್ಳಲು ಪ್ರಯತ್ನಿಸಿ ಪೈಪ್ಗಳನ್ನು ತುಳಿದು ಹಾಳು ಮಾಡಿವೆ.
ಒಂಟಿ ಕೋರೆಯ ಸಲಗಕ್ಕೆ ‘ವಿಕ್ರಾಂತ್’ ಎಂದು ನಾಮಕಾರಣ
ಸಕಲೇಶಪುರ, ಆಲೂರು ಭಾಗದಲ್ಲಿ ಅಂದಾಜು 80ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯೇಕ ಗುಂಪುಗಳಲ್ಲಿ ಬೀಡುಬಿಟ್ಟಿವೆ. ಕಾಡಾನೆ ದಾಳಿಯಿಂದ ಈವರೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗುಂಪಿನಲ್ಲಿರುವ ಕಾಡಾನೆಗಳು ಮನುಷ್ಯರ ಮೇಲೆ ದಾಳಿ ಮಾಡುವುದು ಅಪರೂಪ ಆದರೆ, ಒಂಟಿ ಸಲಗ ಮತ್ತು ಮರಿ ಆನೆ ಹೊಂದಿರುವ ಹೆಣ್ಣಾನೆ ಅಪಾಯಕಾರಿ.
ಹೆತ್ತೂರು ಹೋಬಳಿ ಭಾಗದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ 25 ರಿಂದ 30 ವರ್ಷ ವಯಸ್ಸಾಗಿರಬಹುದು. ಈ ಕಾಡಾನೆಗೆ ಒಂದೇ ದಂತ ಇದ್ದು, ಕೋಪ ಸ್ವಭಾವದ್ದಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಆನೆಯನ್ನು ಗುರುತಿಸಲು ‘ವಿಕ್ರಾಂತ್’ ಎಂದು ನಾಮಕರಣ ಮಾಡಿದ್ದಾರೆ.
ಹೇಗಾದರೂ ಮಾಡಿ ಕಾಡಾನೆ ಸ್ಥಳಾಂತರಿಸಿ
“ಒಂಟಿ ಕಾಡಾನೆ ಯಾವಾಗ ಎಲ್ಲಿ ಕಾಣಿಸಿಕೊಳ್ಳುತ್ತದೆ ಗೊತ್ತಾಗುತ್ತಿಲ್ಲ. ಕಾಫಿ ತೋಟಕ್ಕೆ ಜನರು ಕೆಲಸ ಮಾಡಲು ಹೋಗಲು ಆಗುತ್ತಿಲ್ಲ. ಬೆಳೆದು ಫಸಲಿಗೆ ಬಂದ ಹಸಿರು ತರಕಾರಿಗಳನ್ನು ತುಳಿದು ನಾಶ ಮಾಡುತ್ತಿರುವುದರಿಂದ ರೈತರಿಗೆ ತುಂಬಾ ನಷ್ಟ ಆಗುತ್ತಿದ್ದು. ಈ ಭಾಗದ ರೈತರು ನಿತ್ಯ ಆತಂಕದಲ್ಲಿ ಜೀವನ ನೆಡೆಸುವಂತಾಗಿದೆ. ಹಾಗಾಗಿ ಒಂಟಿ ಆನೆಯನ್ನು ಹೇಗಾದರೂ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಾಂತರಿಸಿ” ಎಂದು ವಳಲಹಳ್ಳಿಯ ಸಮಾಜಿಕ ಕಾರ್ಯಕರ್ತ ಅಂಬರೀಷ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಕಲ ಸರ್ಕಾರಿ ಗೌರವದೊಂದಿಗೆ ಬಲರಾಮನ ಅಂತ್ಯಕ್ರಿಯೆ
ಚುನಾವಣೆ ಬಳಿಕ ಸ್ಥಳಾಂತರಿಸಲಾಗುವುದು ; ಆರ್ಎಫ್ಒ
“ಕೊಡಗು ಜಿಲ್ಲೆಯ ಶನಿವಾರಸಂತೆ ಭಾಗದಿಂದ ಬಂದಿರುವ ಕಾಡಾನೆ, ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಜನರ ಮೇಲೆ ದಾಳಿ ಮಾಡುತ್ತಿದೆ. ಈ ಒಂಟಿ ಸಲಗವನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂಬ ಪ್ರಸ್ತಾಪ ಇದ್ದು, ಚುನಾವಣೆ ಮುಗಿದ ಬಳಿಕ ಅನುಮತಿ ಪಡೆದು ಕಾಡಾನೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗುವುದು” ಎಂದು ಸಕಲೇಶಪುರ ಆರ್ಎಫ್ಒ ಶಿಲ್ಪಾ ಅವರು ಈದಿನ.ಕಾಮ್ಗೆ ತಿಳಿಸಿದರು.