ಧಾರವಾಡದ ಕಮಲಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಅಫನಾ ನಗರದ ಅರಬಾಜ್ ಹಂಚಿನಾಳ (24), ಮುಂಡಗೋಡದ ಇಂಧಿರಾನಗರ ನಿವಾಸಿ ಅಲ್ಲಾವುದ್ದೀನ್ ರಜೇಬ ಅಲಿ (26), ಮುರುಘಾಮಠದ ಮೋರೆ ಪ್ಲಾಟ್ ಅಜಯ ಮದ್ಲಿ(23), ಅಬೀದ್ ಚಟ್ಟರಕಿ(31) ಹಾಗೂ ಹಾವೇರಿಯ ಜುಮ್ಮಾ ಬಜಾರ್ ನಿವಾಸಿ ಅಬೀದ್ ಚಿಟ್ಟವಾಲೆ (27), ಧಾರವಾಡ ಚನ್ನಬಸವೇಶ್ವರ ಕಾಲೋನಿ ಸಾಹೀಲ್ ನಧಾಪ್ (26) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿ ಗಣೇಶ ಕಮ್ಮಾರ ಕೂಡ ಕೊಲೆಯಾಗಿದ್ದಾನೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ರಮಣ ಗುಪ್ತ ಮಾಹಿತಿ ನೀಡಿದ್ದಾರೆ.
ಕಳೆದ ಮೇ 25ರ ರಾತ್ರಿ ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ಮನೆ ಎದುರು ಕುಳಿತಿದ್ದರು. ಈ ವೇಳೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿತ್ತು. ಮಹಮ್ಮದ್ ಕುಡಚಿ ಅವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಗಲಾಟೆಯಲ್ಲಿ ಆರೋಪಿಗಳ ತಂಡದಲ್ಲಿದ್ದ ಗಣೇಶ ಕಮ್ಮಾರ ಎಂಬಾತನಿಗೂ ಮಾರಕಾಸ್ತ್ರದಿಂದ ಇರಿಯಲಾಗಿತ್ತು. ತೀವ್ರ ರಕ್ತಸ್ರಾವವಾಗಿ ಓಡಿದ ಈತ ಕುಡಚಿ ಅವರ ನಿವಾಸದ ಅನತಿ ದೂರದಲ್ಲಿ ಬಿದ್ದು ಮೃತಪಟ್ಟಿದ್ದ. ಉಳಿದ ಹಂತಕರು ಅಲ್ಲಿಂದ ಪರಾರಿಯಾಗಿ ದಾಂಡೇಲಿಯಲ್ಲಿ ತಲೆಮರೆಸಿಕೊಂಡಿದ್ದರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆಸಲಾಗಿತ್ತು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಹತ್ಯೆ
ಹತ್ಯೆ ಪ್ರಕರಣ ಸಂಬಂಧ ಎಲ್ಲ ಹಂತಕರನ್ನು ಬಂಧಿಸಿದ್ದು, ಕೊಲೆಗೆ ಆಸ್ತಿ ಹಾಗೂ ಹಣದ ವ್ಯವಹಾರವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.