ಪರಿಶಿಷ್ಟರು ಎಂಬ ಕಾರಣಕ್ಕಾಗಿ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮಾನ್ಸ್) ಕರ್ತವ್ಯ ನಿರ್ವಹಿಸಲು ಅವಕಾಶ ನಿರಾಕರಿಸಿ, ಅಸ್ಪೃಶ್ಯತೆ ಆಚರಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅವರು ಸೇವೆ ಸಲ್ಲಿಸಲು ತಕ್ಷಣ ಆದೇಶ ಹೊರಡಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.
ಪರಿಶಿಷ್ಟ ಜಾತಿಗೆ ಸೇರಿದ್ದ ಪ್ರಾಧ್ಯಾಪಕ ಡಾ. ಬಿ ರಮೇಶ್ ಬಾಬು ಅವರು 2019ರ ಡಿ. 19ರಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ರಿಮ್ಸ್) ಡಿಮಾನ್ಸ್ಗೆ ವರ್ಗಾವಣೆಯಾಗಿದ್ದರು. ಅವರಿಗೆ ಡಿಮಾನ್ಸ್ನಲ್ಲಿ ಬೋಧನೆ ಮಾಡಲು ನಿರಾಕರಿಸಿ, ಅಸ್ಪೃಶ್ಯತೆ ಆಚರಿಸಲಾಗಿತ್ತು. ಇದರಿಂದಾಗಿ, ಮಾನಸಿಕವಾಗಿ ಕುಗ್ಗಿಹೋಗಿದ್ದ ಬಾಬು ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮೊರೆ ಹೋಗಿದ್ದರು.
ಬಾಬು ಅವರ ಅಳಲನ್ನು ಆಲಿಸಿರುವ ನಿರ್ದೇಶನಾಲಯದ ಡಿಐಜಿ, “ಪರಿಶಿಷ್ಟರಿಗೆ ಮೀಸಲಾದ ಬ್ಯಾಕ್ಲಾಗ್ ಹುದ್ದೆಯಲ್ಲಿ ರಮೇಶ್ ಬಾಬು ಅವರಿಗೆ ಉದ್ಯೋಗ ಮಾಡುವ ಹಕ್ಕಿದೆ. ಅದನ್ನು ಅವರಿಗೆ ಕಲ್ಪಿಸಬೇಕು. ಜೊತೆಗೆ, ಇತರ ವರ್ಗದ ಉದ್ಯೋಗಿಗಳಿಗೆ ನೀಡಿರುವ ಎಲ್ಲ ಸೌಲಭ್ಯಗಳನ್ನು ಅವರಿಗೂ ಒದಗಿಸಬೇಕು. ಅವರಿಗೆ ಉದ್ಯೋಗ ಮಾಡಲು ಅವಕಾಶ ನೀಡುವ ಆದೇಶದ ಪ್ರತಿಯನ್ನು 10 ದಿನಗಳ ಒಳಗೆ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ತಪ್ಪಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ವೈದ್ಯರಿಗೇ ಈ ರೀತಿ ದೌರ್ಜನ್ಯವಾದರೆ ಬಡ ಜನರಿಗೆ ಇನ್ನೆಷ್ಟು ದೌರ್ಜನ್ಯವಾಗಬಹುದು. ಸರ್ಕಾರವು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘ ಆಗ್ರಹಿಸಿದೆ.