- ನ್ಯಾಯಾಂಗ ತನಿಖಾ ವರದಿಯನ್ನೂ ಬಹಿರಂಗಪಡಿಸಿಲ್ಲ
- ಕೊರೊನಾ ಟೂಲ್ ಕಿಟ್ ಹಗರಣದ ತನಿಖೆಗೆ ಚಿಂತನೆ
ಕೊರೊನಾ 2ನೇ ಅಲೆಯ ಸಮಯದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಪ್ರಕರಣವನ್ನು ಮತ್ತೆ ಮರು ತನಿಖೆ ಮಾಡಲಾಗುತ್ತದೆ. ಮಾತ್ರವಲ್ಲದೆ, ಕೊರೊನಾ ಟೂಲ್ ಕಿಟ್ ಹಗರಣದ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೊರೊನಾ 2ನೇ ಅಲೆಯಲ್ಲಿ ಒಮಿಕ್ರಾನ್ ರೂಪಾಂತರಿಯ ಹಾವಳಿಯಿಂದ ಸಾವಿರಾರು ಬಂದಿ ಉಸಿರಾಟ ತೊಂದರೆಗೆ ತುತ್ತಾಗಿ, ಸಾವನ್ನಪ್ಪಿದ್ದರು. ಒಮಿಕ್ರಾನ್ ಸೋಂಕಿತರ ರಕ್ಷಣೆಗೆ ಆಕ್ಸಿಜನ್ ಅತ್ಯಗತ್ಯವಾಗಿತ್ತು. ಇಂತಹ ಸಮಯದಲ್ಲಿ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಅಸಮರ್ಪಕ ನಿರ್ವಹಣೆಯಿಂದ ಒಂದೇ ದಿನ 23 ಮಂದಿ ರೋಗಿಗಳು ಮೃತಪಟ್ಟಿದ್ದರು.
ದುರಂತಕ್ಕೆ ಅಂದಿನ ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತ್ತು. ಆದರೆ, ದುರಂತಕ್ಕೆ ಯಾರನ್ನೂ ಹೊಣೆ ಮಾಡದ ಸರ್ಕಾರ, ಯಾವುದೇ ಕ್ರಮ ಕೈಗೊಂಡಿಲ್ಲ. ಮಾತ್ರವಲ್ಲದೆ, ನ್ಯಾಯಾಂಗ ತನಿಖಾ ವರದಿಯನ್ನೂ ಬಹಿರಂಗಪಡಿಸಿಲ್ಲ.
ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಅಂಬೇಡ್ಕರ್ಗೆ ನಿಂದನೆ ಆರೋಪ; ತನಿಖೆಗೆ ಸಮಿತಿ ರಚನೆ
ಈ ನಡುವೆ ಸರ್ಕಾರ ಬದಲಾಗಿದ್ದು, ಹೊಸ ಸರ್ಕಾರ ಮರು ತನಿಖೆಗೆ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, “ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆ ಪೂರ್ಣ ತನಿಖೆ ನಡೆದಿಲ್ಲ. ಹಾಗಾಗಿ, ಮರು ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ತಿಳಿಸಿದ್ದಾರೆ.
“ದುರಂತಕ್ಕೆ ಯಾರು ಕಾರಣವೆಂದು ಇನ್ನೂ ಗೊತ್ತಾಗಿಲ್ಲ. ಯಾರು ಕಾರಣವೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಕಿಟ್ ಖರೀದಿ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿವೆ. ಅವುಗಳನ್ನು ತನಿಖೆ ನಡೆಸಲು ಚಿಂತಿಸಲಾಗುತ್ತಿದೆ. ಮೊದಲು ಮಾಹಿತಿ ಸಂಗ್ರಹಿಸಿ, ಅಕ್ರಮ ನಡೆದಿದೆಯೆಂದು ಕಂಡುಬಂದರೆ, ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ” ಎಂಂದು ಅವರು ಹೇಳಿದ್ದಾರೆ.