ಸಮಾಜ ನಿರ್ಮಾಣ ಮತ್ತು ವ್ಯಕ್ತಿಯ ಉನ್ನತಿಯಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಕೊಡುಗೆಯನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಹಾಸನ ನಗರದಲ್ಲಿ ಸೆಂಟ್ ಜೋಸೆಫ್ ಕಾಲೇಜಿನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಇಡೀ ಸಮಾಜ ಮತ್ತು ದೇಶದಲ್ಲಿ ನೈತಿಕತೆಯನ್ನು ಮೂಡಿಸುವ, ಆಧುನಿಕ ಜ್ಞಾನದ ಜೊತೆಗೆ ಸಂಸ್ಕೃತಿಯ ಸಂರಕ್ಷಣೆ ಮಾಡುವ, ರಾಷ್ಟ್ರದ ಏಕತೆ-ಸಮಗ್ರತೆ ಮತ್ತು ಸಮಾಜದಲ್ಲಿ ಸಮಾನತೆ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ ಎಂದು ಅಭಿಪ್ರಾಯಪಟ್ಟರು.
“ಶಿಕ್ಷಣದಿಂದ ವ್ಯಕ್ತಿತ್ವವು ರೂಪುಗೊಳ್ಳುತ್ತದೆ, ಮಾನಸಿಕ ಬೆಳವಣಿಗೆಯಾಗುತ್ತದೆ, ಬುದ್ಧಿವಂತಿಕೆಯು ಬೆಳೆಯುತ್ತದೆ ಮತ್ತು ಮನುಷ್ಯ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುತ್ತಾನೆ” ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಈ ನಿಟ್ಟಿನಲ್ಲಿ ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ಹೊಸ ಭಾರತ ನಿರ್ಮಿಸುವ ದೃಷ್ಟಿಯಲ್ಲಿ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸೆಂಟ್ ಜೋಸೆಫ್ ವಿದ್ಯಾಸಂಸ್ಥೆಯು ರಾಷ್ಟ್ರಕ್ಕೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು, ಭಾರತೀಯ ನ್ಯಾಯಾಂಗಕ್ಕೆ ಅನೇಕ ದಿಗ್ಗಜರನ್ನು, ನಾಗರಿಕ ಸೇವಕರು, ವಿಜ್ಞಾನಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮತ್ತು ಸೇನಾ ಅಧಿಕಾರಿಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗ್ಯಾರಂಟಿಗಳ ಟೀಕಿಸುವ ಮುನ್ನ ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿ: ಡಿಕೆಶಿ ತಿರುಗೇಟು
ಶಾಸಕ ಎಚ್ ಪಿ ಸ್ವರೂಪ್ ಪ್ರಕಾಶ್, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತಾರಾನಾಥ್, ಹಾಸನ ಜಿಲ್ಲಾಧಿಕಾರಿ ಅರ್ಚನಾ, ಪೊಲೀಸ್ ವರಿಷ್ಠಾಧಿಕಾರಿ ಹರಿಹರನ್ ಶಂಕರ್, ಹಸನ್ ಜೆಸ್ಯೂಟ್ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಫಾರ್ ಡಿಯೋನಿಸಿಯಸ್ ವಾಜ್, ಹಾಸನ ಜೆಸ್ಯೂಟ್ ಎಜುಕೇಷನಲ್ ಸೊಸೈಟಿ ಪ್ರಾಂಶುಪಾಲ ಡೇನಿಯಲ್ ಫೆರ್ನಾಂಡಿಸ್ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.