ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುತ್ತಿದ್ದರೂ ಗದಗ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಕಡಿಮೆಯಾಗುತ್ತಿಲ್ಲ. ಇಲ್ಲಿಯ ಜನರು ನೆತ್ತಿ ಸುಡುವ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ನೆರಳು ಹಾಗೂ ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ.
ಪಟ್ಟಣಕ್ಕೆ ನಿತ್ಯ ಒಂದಿಲ್ಲೊಂದು ಕೆಲಸದ ನಿಮಿತ್ತ ಸುತ್ತಲಿನ ಗ್ರಾಮಗಳಿಂದ ಬರುವ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಪಟ್ಟಣದ ಹೃದಯ ಭಾಗದಂತಿರುವ ಕಾಲಕಾಲೇಶ್ವರ ವೃತ್ತದಲ್ಲಿ ನೆರಳಿಲ್ಲದ ಕಾರಣ ಬೈಕ್ ಸವಾರರು ವಾಹನಗಳನ್ನು ಬಿಸಿಲಿನಲ್ಲಿಯೇ ನಿಲ್ಲಿಸುವುದರಿಂದ ಬೈಕ್ನಲ್ಲಿನ ಪೆಟ್ರೋಲ್ ಬಿಸಿಲಿಗೆ ಆವಿಯಾಗುತ್ತಿದೆ. ಇದರಿಂದಾಗಿ ಜೇಬಿಗೂ ಕತ್ತರಿ ಬೀಳುತ್ತಿದೆ ಎಂದು ಸವಾರರು ಹೇಳುತ್ತಿದ್ದಾರೆ.
ಗಜೇಂದ್ರಗಡದಿಂದ ಕುಷ್ಟಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ರೋಣ ರಸ್ತೆಯಲ್ಲಿ ಯಾವುದೇ ಮರಗಳಿಲ್ಲ. ದುರ್ಗಾ ವೃತ್ತದಿಂದ ಬಸ್ ನಿಲ್ದಾಣದ ವರೆಗಿನ ಜೋಡಿ ರಸ್ತೆ ಮಧ್ಯದಲ್ಲಿ ಕೆಲ ವರ್ಷಗಳ ಹಿಂದೆ ನೆಟ್ಟಿರುವ ಗಿಡಗಳಲ್ಲಿ ಕೆಲವು ಸಮೃದ್ದವಾಗಿ ಬೆಳೆದಿದ್ದು, ವ್ಯಾಪಾರಿಗಳು, ಬೈಕ್ ಸವಾರರಿಗೆ ನೆರಳು ನೀಡುತ್ತಿವೆ. ಕೆಲವು ಬೈಕ್ ಸವಾರರು ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣದ ಆವರಣಗಳಲ್ಲಿ ಮರಗಳ ನೆರಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ತಮ್ಮ ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆ; ಸ್ಥಳೀಯರ ಆಕ್ರೋಶ
ಪಟ್ಟಣಕ್ಕೆ ಬರುವವರು ಮಧ್ಯಾಹ್ನದ ವೇಳೆ ಬರಲು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಮಧ್ಯಾಹ್ನ ವ್ಯಾಪಾರ ಕಡಿಮೆಯಾಗಿದೆ. ವ್ಯಾಪಾರಸ್ಥರು ತಮ್ಮ ತರಕಾರಿ, ಹಣ್ಣುಗಳನ್ನು ಬಿಸಿಲಿನಿಂದ ರಕ್ಷಿಸಲು ಕೊಡೆ ಅಥವಾ ಒದ್ದೆ ಬಟ್ಟೆಗಳನ್ನು ಅವುಗಳ ಮೇಲೆ ಹಾಕಿ ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಪಟ್ಟಣದಲ್ಲಿ ಎಳನೀರು, ಕಬ್ಬಿನ ಹಾಲು, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿದೆ.
ಕೆಲ ದಿನಗಳ ಹಿಂದೆ ಮೂರ್ನಾಲ್ಕು ದಿನಗಳು ಮಳೆ ಸುರಿದಿದ್ದರಿಂದ ಜನರು ಸಂತಸಗೊಂಡಿದ್ದರು. ಆದರೆ, ಮತ್ತೆ ಮಳೆಯ ಸುಳಿವು ಇಲ್ಲದ ಕಾರಣ ಬಿಸಿಲಿನ ಪ್ರಖರತೆ ಜೊತೆಗೆ ಧಗೆ ಹೆಚ್ಚಾಗಿದೆ. ಈಗಾಗಲೇ ರೈತರು ಮುಂಗಾರು ಭಿತ್ತನೆಗೆ ತಮ್ಮ ಹೊಲಗಳನ್ನು ಹದಗೊಳಿಸಿದ್ದಾರೆ. ಹದವಾದ ಮಳೆ ಸುರಿದರೆ ಭಿತ್ತನೆ ಕಾರ್ಯ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.