ನೂತನ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಕನಿಷ್ಠ 8 ಮಂತ್ರಿ ಸ್ಥಾನಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “371(ಜೆ) ಕಲಂ ತಿದ್ದುಪಡಿಯಂತೆ 2019ರವರೆಗೆ ಇದ್ದ ನಿಯಮಾವಳಿಗಳ ಪ್ರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕಲ್ಯಾಣ ಕರ್ನಾಟಕದ ಮಂತ್ರಿಗಳಿಗೆ ನೀಡಬೇಕು” ಎಂದು ಆಗ್ರಹಿಸಿದರು.
“ಈ ಹಿಂದಿನ ಸರ್ಕಾರದಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಶಾಸಕರಿಗೆ ನೀಡಬೇಕೆಂದು ಮಂಡಳಿಯ ನಿಯಮಾವಳಿಗಳಿಗೆ ಮಾಡಿರುವ ತಿದ್ದುಪಡಿಯನ್ನು ರದ್ದು ಮಾಡಬೇಕು. ಮಂತ್ರಿಗಳನ್ನೇ ಅಧ್ಯಕ್ಷರನ್ನಾಗಿ ನೇಮಿಸಿ, ಮಂಡಳಿಯ ಬಲವರ್ಧನೆ ಹೆಚ್ಚಿಸುವದರ ಜೊತೆಗೆ, ಪರಿಣಾಮಕಾರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ವಾಯತ್ತ ಅಭಿವೃದ್ಧಿ ಮಂಡಳಿಯಾಗಿದ್ದು, ಈ ಮಂಡಳಿಯ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ 10 ವರ್ಷದ ಗಡುವನ್ನಿಟ್ಟುಕೊಂಡು ಕಲ್ಯಾಣದ ಅಭಿವೃದ್ಧಿಗೆ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡಬೇಕು” ಎಂದರು.
“ಕೆಕೆಆರ್ಡಿಬಿಗೆ ಮಂಜೂರಾಗುವ ಅನುದಾನ ಆಯಾ ವರ್ಷದ ಅವಧಿಯ ಕಾಲಮಿತಿಯಲ್ಲಿ ಬಳಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಾರದರ್ಶಕತೆಯಂತೆ ಹಣ ಉಪಯೋಗ ಮಾಡುವುದರ ಜೊತೆಗೆ ಭೌತಿಕ ಕಾಮಗಾರಿಗಳು ಯುದ್ಧೋಪಾಯದಲ್ಲಿ ನಡೆಯುವಂತೆ ಕ್ರಮ ವಹಿಸಬೇಕು” ಎಂದರು.
“371(ಜೆ) ಕಲಂ ತಿದ್ದುಪಡಿಯಡಿ ನೇಮಕಾತಿ ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾದರಿಯ ಮಾನದಂಡದಂತೆ ಅನುಷ್ಠಾನ ಮಾಡಬೇಕು. 371(ಜೆ) ಕಲಂ ನಿಯಮಗಳಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಚೇರಿಗಳನ್ನು ವಿಭಾಗೀಯ ಕೇಂದ್ರ ಕಲಬುರಗಿಗೆ ಸ್ಥಳಾಂತರ ಮಾಡಬೇಕು. ವಿಶೇಷ ಸ್ಥಾನಮಾನ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ನೂತನ ಸರ್ಕಾರ ವರ್ಷದಲ್ಲಿ ಎರಡು ಬಾರಿ ಸಂಪುಟ ಸಭೆಗಳನ್ನು ಕಲಬುರಗಿಯಲ್ಲಿ ನಡೆಸಬೇಕು” ಎಂದರು.
“ವರ್ಷದ ಆರಂಭ ಫೆಬ್ರವರಿ ತಿಂಗಳಲ್ಲಿ ಮತ್ತು ವರ್ಷದ ಕೊನೆ ಹಂತ ಸೆಪ್ಟೆಂಬರ್ ತಿಂಗಳಲ್ಲಿ ಸಂಪುಟ ಸಭೆಗಳನ್ನು ನಡೆಸಬೇಕು. 371ನ(ಜೆ) ಕಲಂ ತಿದ್ದುಪಡಿಯಡಿ ಕಲ್ಯಾಣ ಕರ್ನಾಟಕದ ಮೀಸಲಾತಿ ಕೋಟಾದಡಿ ಮತ್ತು ರಾಜ್ಯಮಟ್ಟದ ಮೆರಿಟ್ ಕೋಟಾದಲ್ಲಿ ನೇಮಕವಾದ 4,194 ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಹೈಕೋರ್ಟಿನಲ್ಲಿ ಪ್ರಶ್ನಿಸಿ ದಾವೆ ಹೂಡಿರುವ ವಿಷಯಕ್ಕೆ ಸಂಬಂಧಿಸಿ ನೂತನ ಸರ್ಕಾರ ನೂತನ ಅಡ್ವಕೇಟ್ ಜನರಲ್ ಅವರ ಮೂಲಕ ನೇಮಕಾತಿಗಳಿಗೆ ಸಮರ್ಥವಾಗಿ ಮಂಡಿಸಿಕೊಂಡು ನಮ್ಮ ಅಭ್ಯರ್ಥಿಗಳಿಗೆ ತಕ್ಷಣ ನ್ಯಾಯ ಒದಗಿಸಿಕೊಡಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದರು.
371(ಜೆ) ಅಡಿ ನಮ್ಮ ಪಾಲಿನ ಖಾಲಿ ಇರುವ ಬಹುತೇಕ ಹುದ್ದೆಗಳನ್ನು ಸಹಜ ಪ್ರಕ್ರಿಯೆಯಂತೆ ಭರ್ತಿ ಮಾಡಬೇಕು. ಅದರಂತೆ ಮುಂಬಡ್ತಿಗಳಿಗೂ ಸಹ ಒಂದು ದಿನವು ತಡೆಯದೆ ಬಡ್ತಿಗಳು ನೀಡಬೇಕು. ಗುಲ್ಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ, ಕಲ್ಯಾಣದ ವಿಶ್ವವಿದ್ಯಾಲಯಗಳ, ಶಾಲಾ-ಕಾಲೇಜುಗಳ, ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಸಕ ಈಶ್ವರ್ ಖಂಡ್ರೆಗೆ ಮಂತ್ರಿಗಿರಿ ನೀಡಲು ಆಗ್ರಹ
“ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಾದರಿಯಂತೆ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆದರೆ, ಮುಂಬಡ್ತಿಗಳಿಗೆ ಸಂಬಂಧಿಸಿ ಸಂಪುಟ ಉಪಸಮಿತಿ ಕಳೆದ ಮಾರ್ಚ್ ತಿಂಗಳ ಸಭೆಯಲ್ಲಿ ಕೈಗೊಂಡ ಸಭೆಯ ನಡಾವಳಿಗಳಂತೆ ಅಯಾ ಇಲಾಖೆಯ ಮುಂಬಡ್ತಿಗಳು ರಾಜ್ಯಮಟ್ಟದ ಶ್ರೇಷ್ಠತೆಯ ಆಧಾರದಂತೆ, ಪರಿಗಣಿಸಿ ಕಲ್ಯಾಣದ ಅಭ್ಯರ್ಥಿಗಳಿಗೆ ಮುಂಬಡ್ತಿಗಳಲ್ಲಿ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಪ್ರಸ್ತುತ ನೂತನ ಮಂತ್ರಿ ಮಂಡಲದಲ್ಲಿ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ನಾಯಕ ಪ್ರಿಯಾಂಕ್ ಖರ್ಗೆಯವರು, ಸಂಪುಟ ಸಚಿವರಾಗಿರುವುದು ಸಂತಸದ ವಿಷಯವಾಗಿದೆ. ಅದರಂತೆ, ಮುಂದೆ ನೂತನವಾಗಿ ಸಂಪುಟದಲ್ಲಿ ಬರುವ ನಮ್ಮ ಭಾಗದ ಸಚಿವರು ರಾಜಕೀಯ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿ ಬದ್ಧತೆ ಪ್ರದರ್ಶನ ಮಾಡುವ ಮೂಲಕ ನಮ್ಮ ಭಾಗದ ಜ್ವಲಂತ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದ್ದಾರೆ.