- ಕಳೆದ ವರ್ಷವೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಉಂಟಾಗಿದ್ದ ವಿವಾದ
- ‘ಜಟ್ಕಾ ಕಟ್ ಮುಂದುವರಿಸಿ – ಹಲಾಲ್ ಕಟ್ ಬಹಿಷ್ಕಾರ’ ಅಭಿಯಾನಕ್ಕೆ ಕರೆ
ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಮಾಡಿ, ಬೇವು ಬೆಲ್ಲ ತಿಂದು, ಹೋಳಿಗೆ ಸಿಹಿ ಊಟದೊಂದಿಗೆ ಆಚರಿಸಲಾಗುತ್ತದೆ. ಆದರೆ, ಮಾರನೇ ದಿನ ಹೊಸತೊಡಕು ಹೆಸರಿನಲ್ಲಿ ಮಾಂಸಹಾರ ಮಾಡುವ ಸಂಪ್ರದಾಯ ಇದೆ. ಈ ಸಂದರ್ಭವನ್ನು ಬಳಸಿಕೊಂಡು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಹುನ್ನಾರ ನಡೆಸಿರುವ ಶ್ರೀರಾಮಸೇನೆ ಈ ವರ್ಷವೂ ಮತ್ತೆ ‘ಹಲಾಲ್ ಕಟ್’ ಮಾಂಸ ಬಹಿಷ್ಕಾರ ಅಭಿಯಾನಕ್ಕೆ ಮುಂದಾಗಿದೆ.
ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ಆರಂಭವಾಗಿ ಮತ್ತೆ ತಣ್ಣಗಾಗಿದ್ದ ಹಲಾಲ್ ಕಟ್ ಮಾಂಸದ ವಿಚಾರವನ್ನು ಶ್ರೀರಾಮಸೇನೆ ಮತ್ತೆ ಮುನ್ನೆಲೆಗೆ ತರಲು ಯತ್ನಿಸುತ್ತಿದೆ. ಹಿಜಾಬ್, ಆಝಾನ್, ಹಾಲಾಲ್ ಕಟ್, ದೇವಸ್ಥಾನಗಳಲ್ಲಿ ಹಿಂದುಯೇತರರಿಗೆ ಅವಕಾಶ ನಿರ್ಬಂಧ ಸೇರಿದಂತೆ ನಾನಾ ವಿಚಾರವಾಗಿ ಕಳೆದ ವರ್ಷ ಭಾರಿ ವಿವಾದ ಉಂಟಾಗಿತ್ತು. ಆ ಮೂಲಕ ಒಂದು ಸಮುದಾಯದ ಆಚರಣೆಗಳನ್ನು ಟೀಕೆ ಮಾಡುವ ಜೊತೆಗೆ ಸಮಾಜದಲ್ಲಿ ಗಲಬೆ ಸೃಷ್ಠಿಸುವ ಹುನ್ನಾರ ನಡೆಸಲಾಗಿತ್ತು. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಲಿಲ್ಲ. ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತೆ ಹಲಾಲ್ ಕಟ್ ಬಹಿಷ್ಕಾರ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಪ್ರಮೋದ್ ಮುತಾಲಿಕ್, “ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೇವು. ಈ ವರ್ಷವೂ ಅಭಿಯಾನವನ್ನು ಮುಂದುವರೆಸಲಿದ್ದೇವೆ. ‘ಜಟ್ಕಾ ಕಟ್ ಮುಂದುವರಿಸಿ – ಹಲಾಲ್ ಕಟ್ ಬಹಿಷ್ಕಾರ’ ಅಭಿಯಾನ ಮಾಡಲಿದ್ದೇವೆ” ಎಂದು ಮುತಾಲಿಕ್ ಹೇಳಿದ್ದಾರೆ.
“ಹಲಾಲ್ ಇಸ್ಲಾಂನದ್ದು, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದುಗಳು ಕತ್ತರಿಸಿದ ಮಾಂಸ ತಿನ್ನುವುದಿಲ್ಲ. ನಾವು ಯಾಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು? ಹಾಲಾಲ್ನಿಂದ ಜಲಾಮ್ – ಉಲೇಮಾ ಟ್ರಸ್ಟ್ಗೆ ಎರಡು ಲಕ್ಷ ಕೋಟಿ ರೂಪಾಯಿ ಆದಾಯವಿದೆ. ಈ ದುಡ್ಡು ಎಲ್ಲಿ ಖರ್ಚು ಆಗುತ್ತಿದೆ? ಹಲಾಲ್ನ ದುಡ್ಡು ಉಗ್ರಗಾಮಿಗಳಿಗೆ ಸಂದಾಯವಾಗುತ್ತದೆ” ಎಂದು ಆರೋಪಿಸಿದ್ದಾರೆ.
ಸಚಿವ ವಿ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ
“ಸಚಿವ ವಿ ಸುನೀಲ್ ಕುಮಾರ್ ಅವರು ಶಾಸಕ ಮತ್ತು ಸಚಿವ ಸ್ಥಾನಕ್ಕೆ ಏರಲು ಕೇಸರಿ ಶಾಲು, ಹಿಂದುತ್ವವೇ ಕಾರಣ. ಸುನೀಲ್ ಕುಮಾರ್ಗೆ ನಾಚಿಕೆ ಮಾನ ಮರ್ಯಾದೆ ಇದ್ಯಾ. ಹಿಂದುತ್ವ ಎಂದರೆ ದುಡ್ಡು ಮಾಡೋದು, ಸೊಕ್ಕು ತೊರಿಸೋದು ಅಲ್ಲ. ಕೇಸರಿ ಶಾಲು ಹಾಕಿ ದತ್ತಪೀಠ ಹೋರಾಟ ಮಾಡಿರೋದು ಮರೆತು ಹೋಯ್ತಾ? ಸುನೀಲ್ ಕುಮಾರ್ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ” ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.