- ಇಂದ್ರಜೈನ್ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು
- ಜೈನ ಮಠದ ಸ್ವಾಮೀಜಿಗಳು, ಟ್ರಸ್ಟಿಗಳು ಹಾಗೂ ಮುಖಂಡರಿಂದ ಆಯ್ಕೆ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಜೈನ ಮಠದ ಉತ್ತರಾಧಿಕಾರಿಯಾಗಿ ಆಗಮಶಾಸ್ತ್ರಿ ಇಂದ್ರಜೈನ್ ನೇಮಕವಾಗಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವಾರದ ಇಂದ್ರಜೈನ್, 22 ವರ್ಷ ಹರೆಯದವರಾಗಿದ್ದು, ಬಿಕಾಂ ಪದವಿ ಪಡೆದಿದ್ದಾರೆ.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಾವನ್ನಪ್ಪಿದ್ದರಿಂದ ಶ್ರವಣಬೆಳಗೊಳ ಜೈನ ಮಠದ ಉತ್ತರಾಧಿಕಾರಿ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಇಂದ್ರಜೈನ್ ಅವರನ್ನು ನೇಮಕ ಮಾಡಲಾಗಿದೆ.
ಚಾರುಕೀರ್ತಿ ಸ್ವಾಮೀಜಿಯ ಆರೋಗ್ಯ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆಯೇ ಶ್ರವಣಬೆಳಗೊಳದ ಜೈನ ಮಠದ ಉತ್ತರಾಧಿಕಾರಿ ನೇಮಕದ ಕುರಿತು ಚರ್ಚೆ ನಡೆಸಲಾಗಿತ್ತು. ಮಠಕ್ಕೆ ಇಂದ್ರ ವಂಶಸ್ಥರೇ ಸ್ವಾಮೀಜಿಯರಾಗುವ ಪರಂಪರೆಯಿರುವುದರಿಂದ ಆ ಬಗ್ಗೆ ಹಲವು ಜೈನಮಠದ ಸ್ವಾಮೀಜಿಯವರು, ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಟ್ರಸ್ಟಿಗಳು, ಜೈನ ಸಮುದಾಯದ ಮುಖಂಡರು ಸೇರಿ ಚರ್ಚಿಸಿದ್ದರು. ಎಲ್ಲರೂ ಒಮ್ಮತದಿಂದ ಆಗಮಶಾಸ್ತ್ರಿ ಇಂದ್ರಜೈನ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿದ್ದರು.
ಆಗಮಶಾಸ್ತ್ರಿ ಇಂದ್ರಜೈನ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡ ನಂತರ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು. ಕಳೆದ 20 ದಿನಗಳಿಂದಲೂ ಶ್ರವಣಬೆಳಗೊಳ ಮಠದಲ್ಲಿ ಆಗಮಶಾಸ್ತ್ರಿ ಇಂದ್ರಜೈನ್ ಅವರಿಗೆ ಮಠದ ಪರಂಪರೆ, ಆಚಾರ–ವಿಚಾರ, ಮಠದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.