- ಸಕಲೇಶಪುರದಿಂದ ಆಲೂರಿಗೆ ಹೋಗಬೇಕಿದ್ದ ವೃದ್ಧ
- ಧರ್ಮಸ್ಥಳದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್
ಕೆಎಸ್ಆರ್ಟಿಸಿ ಬಸ್ ಹತ್ತಲು ಕಂಡಕ್ಟರ್ ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡ ವೃದ್ಧರೊಬ್ಬರು ನಡು ರಸ್ತೆಯಲ್ಲಿಯೇ ಬಸ್ ಎದುರು ಏಕಾಂಗಿಯಾಗಿ ಧರಣಿ ನಡೆಸಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಸೋಮವಾರ ನಡೆದಿದೆ.
ಕುಂದಾಪುರ ವಿಭಾಗದ ಕೆಎಸ್ಆರ್ಟಿಸಿ ಬಸ್ ಧರ್ಮಸ್ಥಳದಿಂದ ಸಕಲೇಶಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿತ್ತು. ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿದ್ದ ವೇಳೆ, ವೃದ್ಧ ಬಸ್ ಹತ್ತಲು ಮುಂದಾಗಿದ್ದಾರೆ. ವೃದ್ಧನನ್ನು ತಡೆದ ಕಂಡಕ್ಟರ್ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ತಾನು ಆಲೂರಿಗೆ ಹೋಗಬೇಕೆಂದು ತಿಳಿಸಿ ವೃದ್ಧ ಬಸ್ ಹತ್ತಲು ಹೋದಾಗ ಕಂಡಕ್ಟರ್ ಉಡಾಫೆಯಿಂದ ವರ್ತಿಸಿ, ಬಸ್ನಲ್ಲಿ ಸೀಟ್ ಖಾಲಿ ಇಲ್ಲವೆಂದು ವೃದ್ಧನನ್ನು ಬಸ್ ಹತ್ತಲು ಬಿಡದೆ ಕೆಳಗಿಳಿಸಿದ್ದಾರೆ.
ಇದರಿಂದ ಕೋಪಗೊಂಡ್ಡ ವೃದ್ಧ ಬಸ್ ಎದುರು ರಸ್ತೆಯಲ್ಲಿಯೇ ಏಕಾಂಗಿಯಾಗಿ ಧರಣಿ ಕುಳಿತು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅಲ್ಲಿದ್ದ ನಾಗರಿಕರು ವೃದ್ಧನ ಮನವೊಲಿಸಿ ಅದೇ ಬಸ್ ಹತ್ತಿಸಿ ಆಲೂರಿಗೆ ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಆಕಸ್ಮಿಕ ಬೆಂಕಿ; ನೂರಾರು ಎಕೆರೆ ಕಾಫಿ ತೋಟ ಬೆಂಕಿಗಾಹುತಿ
ಬೆಂಗಳೂರು – ಮಂಗಳೂರು ನಡುವೆ ಸಂಚರಿಸುವ ಬಹುತೇಕ ಸರ್ಕಾರಿ ಬಸ್ಗಳಲ್ಲಿ ಕಂಡಕ್ಟರ್ಗಳು ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರಯಾಣಿಕರಿಗೆ ಬಸ್ ಹತ್ತಲು ಅವಕಾಶ ನೀಡುವುದಿಲ್ಲ. ಸ್ಥಳೀಯರನ್ನು ಬಸ್ ಹತ್ತಿಸಿಕೊಂಡರೆ ದೂರದ ಪ್ರಯಾಣಿಕರು ಸಿಗುವುದಿಲ್ಲ ಎಂಬ ಉದ್ದೇಶದಿಂದ ಹೀಗೆ ಸ್ಥಳೀಯ ಪ್ರಯಾಣಿಕರನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೆಎಸ್ಆರ್ಟಿಸಿ ಸಿಬ್ಬಂದಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕಿದೆ.