ಹಾಸನದ ಶಾಸಕರು ಹೊಳೆನರಸೀಪುರ ಮತ್ತು ಹೇಮಾವತಿ ನಗರಕ್ಕೆ ಸವಾಲು ಹಾಕಿದ್ದಾರೆ. ಆದರೆ, ಹೊಳೆನರಸೀಪುರ ಹಾಗೂ ಹೇಮಾವತಿ ನಗರ ಒಂದಾದರೆ ಬಿಜೆಪಿ ಏನಾಗುತ್ತೆ ನೋಡಿ. ʼಇಷ್ಟು ದಿನ ನಿಮ್ಮ ಹವಾ, ಇನ್ಮುಂದೆ ನಮ್ಮ ಹವಾ’ ಎಂದು ಶಾಸಕ ಪ್ರೀತಂ ಗೌಡರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ರ್ಯಾಲಿ ನಡೆಸಿದ್ದ ಬಿಜೆಪಿಯ ಪ್ರೀತಂ ಗೌಡ, ‘ಹೊಳೆನರಸೀಪುರ ಹಾಗೂ ಹೇಮಾವತಿ ನಗರ (ಹಾಸನದ ಸ್ವರೂಪ್ ಮನೆಯಿರುವ ಪ್ರದೇಶ)ಕ್ಕೆ ಕೇಳುವ ಹಾಗೆ ಘೋಷಣೆ ಕೂಗಿ’ ಎಂದು ಕಾರ್ಯಕರ್ತರಿಗೆ ಹೇಳಿದ್ದರು. ಎಲ್ಲಿಂದಲೋ ಜನ ಕರೆದುಕೊಂಡು ಬಂದು ಶಕ್ತಿ ಪ್ರದರ್ಶಿಸುವುದಲ್ಲ. ಜೆಡಿಎಸ್ ರ್ಯಾಲಿ ವೇಳೆ ಬರುವ ಜನಸಂದಣಿಯನ್ನು ಕಂಡು ಅವರು ಕಣ್ಣು ತುಂಬಿಕೊಳ್ಳಲಿ” ಎಂದು ಸವಾಲು ಹಾಕಿದ್ದಾರೆ.
“ನಾವು ಪಕ್ಕದ ಜಿಲ್ಲೆಯಿಂದ ಅಥವಾ ಪಕ್ಕದ ತಾಲೂಕಿನಿಂದ ಜನ ಕರೆದುಕೊಂಡು ಬರುವುದಿಲ್ಲ. ಯಾರಿಗೂ ಹಣ ಕೊಟ್ಟು ಕರೆದುಕೊಂಡು ಬರುವುದಿಲ್ಲ. ಇದೇ ಕ್ಷೇತ್ರದ ಮತದಾರರೇ ಪ್ರೀತಿಯಿಂದ ಬರುತ್ತಾರೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜಾಪ್ರಭುತ್ವದಲ್ಲಿ ಜನರೇ ಜನಾರ್ಧನರು, ಮೋದಿ ದೇವರಲ್ಲ: ಸಿದ್ದರಾಮಯ್ಯ
ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಮುಖ್ಯ ಪ್ರಚಾರಕರ ಹೆಸರನ್ನು ಪ್ರಕಟಿಸಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಸೇರಿದಂತೆ 27 ಮಂದಿ ಮುಖ್ಯ ಪ್ರಚಾರಕರಾಗಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಅವರಿಗೆ ಪ್ರಮುಖ ಪ್ರಚಾರಕರ ಸ್ಥಾನವನ್ನು ನೀಡಲಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಮತ್ತು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಆರ್ ಸಂತೋಷ್ ಅವರ ನಾಮಪತ್ರ ಸಲ್ಲಿಸಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ , ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರು ಸಿ.ಎಂ ಇಬ್ರಾಹಿಂ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.