ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ನಾರ್ವೆ ಸೋಮಶೇಖರ್ ಅವರು ಕೇಸರಿ ಪಕ್ಷ ತೊರೆದಿದ್ದು, ಜೆಡಿಎಸ್ಅನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಹಾಸನದ ಅಶೋಕ ಹೋಟೆಲ್ನಲ್ಲಿ ಜೆಡಿಎಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಅವರು ಸಂಜೆ ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿಯ ಗನ್ನಿಕಡದ ನಿವಾಸದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದರು. ಆದರೆ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಹಾಸನ, ಸಕಲೇಶಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲು ನಾರ್ವೆ ಸೋಮಶೇಖರ್ ನಿರ್ಧರಿಸಿದ್ದಾರೆ. ಹಾಸನ ಶಾಸಕ ಪ್ರೀತಂ ಗೌಡ ಅವರನ್ನು ಈ ಬಾರಿ ಸೋಲಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಎಚ್.ಡಿ ರೇವಣ್ಣ ಹಾಗೂ ಅವರ ಕುಟುಂಬಕ್ಕೆ ಬಲ ಬಂದಂತಾಗಿದ್ದು, ಸ್ವರೂಪ್ ಪ್ರಕಾಶ್ ಅವರಿಗೆ ವಿಶ್ವಾಸ ಬಂದಂತಾಗಿದೆ.
ಈ ಸುದ್ದಿ ಓದಿದ್ದೀರಾ? ಶ್ರವಣಬೆಳಗೊಳ | ಹುಟ್ಟೂರಿನ ಋಣ ತೀರಿಸಲು ಎಂದೂ ಸಾಧ್ಯವಿಲ್ಲ: ಶಾಸಕ ಬಾಲಕೃಷ್ಣ
ಕಳೆದ ಚುನಾವಣೆಯಲ್ಲಿ ಸಕಲೇಶಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾರ್ವೆ ಸೋಮಶೇಖರ್ ಅವರು ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಈ ಬಾರಿ ಬಿಜೆಪಿಯಿಂದ ಟಿಕೆಟ್ ಲಭಿಸುತ್ತದೆ ಎಂಬ ವಿಶ್ವಾಸದಿಂದ ಇದ್ದ ನಾರ್ವೆ ಸೋಮಶೇಖರ್ ಅವರನ್ನು ಬಿಜೆಪಿ ವರಿಷ್ಠರು ಒಪ್ಪಲಿಲ್ಲ. ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿದ್ದ ಪ್ರೀತಂ ಗೌಡ ಅವರು ಸಿಮೆಂಟ್ ಮಂಜು ಅವರಿಗೆ ಟಿಕೆಟ್ ಕೊಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಇಬ್ಬರನ್ನು ಸೋಲಿಸಬೇಕು ಎಂಬ ಕಾರಣದಿಂದ ನಾರ್ವೆ ಸೋಮಶೇಖರ್ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.